ಚೆನ್ನೈ: ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರು ನಡುವಿನ ಶೀತಲ ಸಮರ ಈಗ ವಿಕೋಪಕ್ಕೆ ತಿರುಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ತಮಿಳುನಾಡು ರಾಜ್ಯಪಾಲರು ವಿಧಾನಸಭೆ ಕಲಾಪದಿಂದ ಹೊರ ನಡೆದಿದ್ದಾರೆ. ಈ ಹಿಂದೆ ಕೇರಳ ಗವರ್ನರ್ ಆರೀಫ್ ಅಹ್ಮದ್ ಕೂಡ ಇದೇ ರೀತಿ ಮಾಡಿದ್ದರು. ತಮಿಳುನಾಡು ವಿಧಾನಸಭೆಯ ಈ ವರ್ಷದ ಮೊದಲ ಕಲಾಪ ಇಂದು ಆರಂಭವಾಗಿದ್ದು, ಕಲಾಪಕ್ಕೆ ಬಂದ ತಮಿಳುನಾಡು ಗವರ್ನರ್ ಎಂ. ಎನ್. ರವಿ ಅವರು ರಾಜ್ಯದ ಗವರ್ನರ್ ಆಗಿ ಮಾಡಬೇಕಿದ್ದ ಸಂಪ್ರದಾಯಿಕ ಭಾಷಣವನ್ನು ಮಾಡದೇ ಸದನದಿಂದ ಹೊರ ನಡೆದಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಹಾಗೂ ತಮಿಳುನಾಡು ರಾಜ್ಯಪಾಲ ಎಂ. ಎನ್. ರವಿ ಅವರ ಮಧ್ಯೆ ಈ ಹಿಂದಿನಿಂದಲೂ ನಿರಂತರ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ನಂತರದಲ್ಲಿ ತಮಿಳುನಾಡು ರಾಜ್ಯಪಾಲರು ತಮಿಳುನಾಡು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಹಾಗೆಯೇ ತಮಿಳುನಾಡು ಸರ್ಕಾರವೂ ಕೂಡ ರಾಜ್ಯಪಾಲರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಈಗ ರಾಜ್ಯಪಾಲರು ಭಾಷಣ ಓದದೇ ಸದನದಿಂದ ತೆರಳುವುದರೊಂದಿಗೆ ಈ ಸಮರ ಇನ್ನೊಂದು ಹಂತ ತಲುಪಿದೆ.
ರಾಜ್ಯಪಾಲರ ಭಾಷಣ ವಾಡಿಕೆಯಂತೆ ರಾಜ್ಯ ಸರ್ಕಾರದ ಕೆಲ ಯೋಜನೆಗಳು ಹಾಗೂ ಕಾರ್ಯವೈಖರಿ ಹಾಗೂ ಕಲಾಪದ ಆಜೆಂಡಾನ್ನು ಹೊಂದಿತ್ತು. ಸಂಪ್ರದಾಯದಂತೆ ತಮಿಳುನಾಡು ಸರ್ಕಾರ ಸಿದ್ಧಪಡಿಸಿದ ಈ ಭಾಷಣದ ಭಾಷಾಂತರವನ್ನು ರಾಜ್ಯಪಾಲರು ಓದಬೇಕಿತ್ತು. ನಂತರ ರಾಜ್ಯ ಸರ್ಕಾರವು ತನ್ನ ಕಾರ್ಯವನ್ನು ಪರಿಶೀಲಿಸಿದ ಮತ್ತು ಅಧಿವೇಶನದ ಕಾರ್ಯಸೂಚಿಯನ್ನು ರೂಪಿಸಿದ ಈ ಭಾಷಣದ ಅನುವಾದವನ್ನು ತಮಿಳುನಾಡು ಸ್ಪೀಕರ್ ಎಂ.ಅಪ್ಪಾವು ಅವರು ಓದಿದರು. ಆದರೆ ರಾಜ್ಯಪಾಲರು ಭಾಷಣದ ಕೊನೆಯಲ್ಲಿ ರಾಷ್ಟ್ರಗೀತೆಗೂ ಕಾಯದೆ ಗದ್ದಲದಿಂದ ಕೂಡಿದ ಸದನದಿಂದ ಸೀದಾ ಹೊರ ನಡೆದರು.