ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ 35 ಬಗೆಯ ಸುಧಾರಿತ ಕೃಷಿ ತಳಿಗಳನ್ನು ಅನಾವರಣಗೊಳಿಸಿದರು. ಭಾರತೀಯ ವಿಜ್ಞಾನಿಗಳ ಸಂಶೋಧನೆಯ ಫಲವಿದು. ಈ ಪೈಕಿ ಗಮನಸೆಳೆಯುವಂಥದ್ದು ಭತ್ತದ ತಳಿ. ಅಕ್ಕಿಯ ಕೃಷಿ ವ್ಯಾಪಕವಾಗಿರುವ ಭಾರತದಲ್ಲಿ ಸಮಸ್ಯೆ ಇರುವುದು ನೀರಿನ ನಿರ್ವಹಣೆಯಲ್ಲಿ.
ಏಕೆಂದರೆ ಸಾಂಪ್ರದಾಯಿಕ ರೀತಿಯಲ್ಲಿ ಒಂದು ಕೆಜಿ ಅಕ್ಕಿ ಉತ್ಪಾದನೆಯಾಗುವುದಕ್ಕೆ 3,000ದಿಂದ 5,000 ಲೀಟರ್ ನೀರು ಬೇಕಾಗುತ್ತದೆ. ಈಗ ಬಂದಿರುವ ಸುಧಾರಿತ ತಳಿ ನೀರಿನ ಬಳಕೆ ಪ್ರಮಾಣವನ್ನು ಶೇ. 50-60 ಕಡಿಮೆ ಮಾಡುತ್ತದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನೂತನ ತಳಿಯ ಬೀಜಗಳನ್ನು ಅಭಿವೃದ್ಧಿಪಡಿಸಿದ್ದು, ಈ ತಳಿಯನ್ನು ಭೂಮಿಗೆ ನೆಡುವ ಮುನ್ನ ಮಣ್ಣನ್ನು ತೇವಗೊಳಿಸದರೆ ಅಷ್ಟೇ ಸಾಕು. ಸಾಂಪ್ರದಾಯಿಕ ರೀತಿಯಲ್ಲಿ ನೀರು ನಿಲ್ಲಿಸಿ ಕೃಷಿ ಮಾಡುವ ಅಗತ್ಯವಿಲ್ಲ. ಹೀಗೆ ನೀರಿನ ಅತಿ ಬಳಕೆ ಇಲ್ಲವಾದಾಗ ಭತ್ತದ ಸಸಿಗಳ ನಡುವೆ ಕಳೆ ಬೆಳೆದುಕೊಳ್ಳುವ ಸಮಸ್ಯೆಯು ಇಲ್ಲವಾಗುತ್ತದೆ.
ಯಾವುದೇ ಹೊಸ ತಳಿಗಳನ್ನು ರೈತರು ಕೊಳ್ಳಬೇಕಾದರೆ ಅದರ ಅಡ್ಡಪರಿಣಾಮಗಳ ಬಗ್ಗೆ ಭಯ ಇದ್ದೇ ಇರುತ್ತದೆ. ಆದರೆ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಅಡ್ಡಪರಿಣಾಮಗಳ ಬಗ್ಗೆ ಯೋಚಿಸದೆ ಸಾಮಾನ್ಯವಾದ, ಅಗ್ಗವಾದ ಸಸ್ಯನಾಶಕ ಸಿಂಪಡಿಸಬಹುದಾಗಿದೆ. ನಮ್ಮ ಗಮನ ಹೆಚ್ಚು ಪೌಷ್ಟಿಕಾಂಶ ಇರುವ ಬೀಜಗಳ ತಯಾರಿ ಮೇಲಿದೆ. ಅದರಲ್ಲಿಯೂ ಬದಲಾಗುತ್ತಿರುವ ಈ ಹವಾಮಾನಕ್ಕೆ ಹೊಂದಿಕೊಳ್ಳುವ ಅಗತ್ಯ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.