ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಗದ್ದಲ ಉಂಟು ಮಾಡಿ, ಕಲಾಪಗಳನ್ನು ಪದೇ ಪದೇ ಮುಂದೂಡುವಂತೆ ಮಾಡಿದ ವಿರೋಧ ಪಕ್ಷಗಳ ನಡವಳಿಕೆ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ ಭಾಷಣ ಕುರಿತು ಮಂಗಳವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಸೃಷ್ಟಿಸಿದ ಗದ್ದಲ ಕುರಿತು ಪ್ರಧಾನಿ ಮೋದಿಯವರು ತೀವ್ರವಾಗಿ ಕಿಡಿಕಾರಿದರು ಎಂದು ಜೋಶಿ ಮಾಹಿತಿ ನೀಡಿದ್ದಾರೆ.
ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸುತ್ತಿದ್ದರೆ, ವಿಪಕ್ಷಗಳು ಕಲಾಪಕ್ಕೆ ಭಂಗ ತರುವ ಮೂಲಕ ಪ್ರಜಾಪ್ರಭುತ್ಬ, ಸಂವಿಧಾನ ಹಾಗೂ ಜನರಿಗೆ ದ್ರೋಹ ಬಗೆಯುತ್ತಿವೆ. ಅಧಿವೇಶನದಲ್ಲಿ ಸಚಿವರ ಕೈಯಿಂದ ಕಾಗದ ಕಸಿದು ಅದನ್ನು ಹರಿದು ಹಾಕಲಾಗುತ್ತದೆ ಎಂದರೆ, ವಿಪಕ್ಷ ನಾಯಕರಿಗೆ ಸಂಸದೀಯ ನಡುವಳಿಕೆ ಬಗ್ಗೆ ಅದೆಷ್ಟು ಗೌರವವಿದೆ ಎಂಬುದು ತಿಳಿಯುತ್ತದೆ ಎಂದು ಪ್ರಧಾನಿ ಮೋದಿ ಅಸಮಾಧಾನ ಹೊರಹಾಕಿದರು ಎಂದು ಹೇಳಿದರು.