ನವದೆಹಲಿ: ‘75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಹಳ್ಳಿಗಳ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುವಂತೆ ಬಿಜೆಪಿಯ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಚರ್ಚೆಗೆ ಸಿದ್ಧವಿದೆ. ಆದರೆ, ಪ್ರತಿಪಕ್ಷಗಳು ಅದಕ್ಕೆ ತಯಾರಿಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವಂತೆಯೂ ಪ್ರಧಾನಿಯವರು ಪಕ್ಷದ ಸಂಸದರಿಗೆ ತಿಳಿಸಿದ್ದಾರೆ. ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆ ಕೇವಲ ಸರ್ಕಾರದ ಕಾರ್ಯಕ್ರಮವಾಗಿ ಇರಬಾರದು. ಅದು ಜನರನ್ನೊಳಗೊಂಡ ಕಾರ್ಯಕ್ರಮವಾಗಿರಬೇಕು ಎಂದು ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಅವರು ಹೇಳಿದ್ದಾಗಿ ಮೇಘವಾಲ್ ತಿಳಿಸಿದ್ದಾರೆ.
ಪ್ರತಿ ಕ್ಷೇತ್ರದಲ್ಲಿ ಪಕ್ಷದ ಇಬ್ಬರು ಕಾರ್ಯಕರ್ತರನ್ನು ಒಳಗೊಂಡಂತೆ ತಂಡವನ್ನು ರಚಿಸಲು ಸಂಸದರಿಗೆ ಪ್ರಧಾನಿ ಸೂಚಿಸಿದ್ದಾರೆ. ಈ ತಂಡವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ 2047 ರ ವೇಳೆಗೆ, ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆ ವೇಳೆಗೆ ಭಾರತವು ಹೇಗಿರಬೇಕು ಎಂಬ ಕುರಿತು ಅಭಿಪ್ರಾಯ ಸಂಗ್ರಹಿಸುವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.