ನವದೆಹಲಿ: ಕೋವಿಡ್ 19ನಿಂದಾಗಿ ಸಾವಿಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ನೀಡಲಾಗುವ ಮರಣಪತ್ರಗಳಲ್ಲಿ ಆತ್ಮಹತ್ಯೆಯಿಂದಾದ ಸಾವನ್ನು ಸೇರಿಸದಿರುವ ಕುರಿತ ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು, ಕೋವಿಡ್ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಅಂಥವರಿಗೆ ಕೋವಿಡ್ ಮರಣಪತ್ರಗಳನ್ನು ನೀಡಲಾಗದು ಎಂದು ನೀವು ನಿರ್ದಿಷ್ಟವಾಗಿ ಹೇಳಿದ್ದೀರಿ. ಆದರೆ, ಇದನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ಅವರು, ಸಾವಿನ ಕಾರಣ ಆತ್ಮಹತ್ಯೆ ಎಂದಾಗಿರುತ್ತದೆಯೇ ಹೊರತು ಕೋವಿಡ್ ಅಲ್ಲ ಎಂದರು. ಈ ಬಗ್ಗೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಅಫಿಡವಿಟ್ ಮೇಲ್ನೋಟಕ್ಕೆ ಸರಿ ಎನಿಸುತ್ತದೆ. ಆದರೆ, ಕೊರೊನಾ ಪೀಡಿತರಾಗಿ ಅದರಿಂದಲೇ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಏನೂ ಹೇಳಿಲ್ಲ ಎಂದೂ ಪೀಠವು ಪ್ರಶ್ನಿಸಿತು.
ಕೋವಿಡ್ನಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಆತ್ಮಹತ್ಯೆ ಎನ್ನುವ ಕಾರಣಕ್ಕಾಗಿ ಅವರಿಗೆ ಪರಿಹಾರ ನೀಡದಿರುವುದು ಅಸಮಂಜಸ ಎಂದು ಪ್ರಶ್ನಿಸಿ ವಕೀಲರಾದ ರೀಪಕ್ ಕನ್ಸಲ್ ಮತ್ತು ಗೌರವ್ ಕುಮಾರ್ ಬನ್ಸಲ್ ಎಂಬುವರು ಅರ್ಜಿ ಸಲ್ಲಿಸಿದ್ದರು.