ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಇಲ್ಲಿನ ಏರೋನಾಟಿಕಲ್ ಡೆವಲಪ್ಮೆಂಟ್ ಇನ್ಸ್ಟಾಬ್ಲಿಶ್ಮೆಂಟ್ (ಎಡಿಇ) ಸೌಲಭ್ಯಕ್ಕೆ ಭೇಟಿ ನೀಡಿದರು ಮತ್ತು ಎಲ್ಸಿಎ ತೇಜಸ್ ಸಿಮ್ಯುಲೇಟರ್ ಅನ್ನು ಹಾರಿಸಿದ್ದಾರೆ.
ಈ ಕುರಿತು ಅವರು ಟ್ವೀಟ್ ಮಾಡಿದ್ದು, “ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಇನ್ಸ್ಟಾಬ್ಲಿಶ್ಮೆಂಟ್ (ಎಡಿಇ) ಸೌಲಭ್ಯದಲ್ಲಿ ಎಲ್ ಸಿಎ ತೇಜಸ್ ಸಿಮ್ಯುಲೇಟರ್ ನಲ್ಲಿ ಹಾರುವ ಅದ್ಭುತ ಅನುಭವವನ್ನು ಹೊಂದಿದ್ದೇನೆ” ಎಂದಿದ್ದಾರೆ.
ಸಿಮ್ಯುಲೇಟರ್ ಎಂಬುದು ನೈಜವಾಗಿ ವ್ಯವಸ್ಥೆಯನ್ನು ಚಲಾಯಿಸುತ್ತಿರುವಂಥ ಅನುಭವ ನೀಡುವಂಥ ಒಂದು ವ್ಯವಸ್ಥೆ. ರಾಜನಾಥ ಸಿಂಗ್ ಸಿಮ್ಯುಲೇಟರ್ ಮಾದರಿಯಲ್ಲಿ ಕುಳಿತಿದ್ದ ಎಲ್ ಸಿಎ ತೇಜಸ್, ಎರಡು ರೀತಿಯಲ್ಲಿ ಉಪಯೋಗಿಸಬಹುದಾದ ಹಗುರವಾದ ಯುದ್ದ ವಿಮಾನ. ಇದಕ್ಕೆ ಬಾಲವಿಲ್ಲ, ಒಂದು ಎಂಜಿನ್ನಿಂದ ನಡೆಯುವಂತೆ ಡೆಲ್ಟಾ ರೆಕ್ಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಮೂಲತಃ ಲೈಟ್ ಕಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಎನ್ನುತ್ತಾರೆ.
ರಾಜನಾಥ್ ಸಿಂಗ್ ಅವರು ಇಲ್ಲಿ ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಭೇಟಿ ಮಾಡಿದ್ದಾರೆ. ಜೊತೆಗೆ, ಅಲ್ಲಿನ ಪ್ರಗತಿಯನ್ನು ಪರಿಶೀಲಿಸಿದ್ದಾರೆ.
1971ರ ಭಾರತ-ಪಾಕಿಸ್ತಾನ ಯುದ್ಧದ ಸುವರ್ಣ ಮಹೋತ್ಸವದ ಸ್ಮರಣಾರ್ಥವಾಗಿ ಭಾರತೀಯ ವಾಯುಪಡೆಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಿಂಗ್ ನಗರದಲ್ಲಿದ್ದಾರೆ.
ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ನಲ್ಲಿ ಮುಖ್ಯ ಭಾಷಣ ಮಾಡುತ್ತಾರೆ.
ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಹಿರಿಯ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸುತ್ತಾರೆ.