ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಶಿಷ್ಟಾಚಾರದಂತೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಆಗಿರುವುದರಿಂದ ತನ್ನದೇ ಆದ ಮಹತ್ವ ಪಡೆದಿದೆ ಎಂದು ಹೇಳಿದ ರಾಷ್ಟ್ರಪತಿ ಕೋವಿಂದ್, ಮಹಾತ್ಮ ಗಾಂಧಿ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು.
ಅಮೃತ ಮಹೋತ್ಸವದಲ್ಲಿರುವ ನಮಗೆ ಸಂಭ್ರಮ ಹೆಚ್ಚಿದೆ. ಆದರೆ ದೇಶದಲ್ಲಿ ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಎಚ್ಚರ ಮರೆಯಬಾರದು. ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಕೊರೋನಾ ಮಾರ್ಗಸೂಚಿ ಪಾಲಿಸಬೇಕು ಎಂದು ಕೋವಿಂದ್ ಎಚ್ಚರಿಕೆ ನೀಡಿದರು. ಪ್ರತಿಯೊಬ್ಬರು ಕೊರೋನಾ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ನಾವು ಒಳಿತಿನ ಹಾದಿಯಲ್ಲಿ ಹೇಗೆ ಮುನ್ನಡೆಯಬೇಕು ಎನ್ನುವುದನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟರು. ತಪ್ಪು ಹಾದಿಯಲ್ಲಿ ವೇಗವಾಗಿ ಓಡುವುದಕ್ಕಿಂತಲ್ಲೂ ಸರಿಯಾದ ದಾರಿಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ನಾವು ಸ್ವಾತಂತ್ರ್ಯ ಸಿಕ್ಕ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಈ ದಿನದ ಹಿಂದೆ ಹಲವರ ತ್ಯಾಗ ಬಲಿದಾನಗಳಿವೆ. ದೇಶ ಕಾಣದ ಹಲವರ ಹೋರಾಟ, ತಿಳಿಯದೇ, ಅರಿಯದೇ ಹೋದ ಹಲವರ ಬಲಿದಾನಗಳಿವೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ, ಹೋರಾಟ ಮಾಡಿದ ಸ್ವಾತಂತ್ರ್ಯ ವೀರರಿಗೆ ನನ್ನ ನಮನಗಳು. ಈ ಸಂದರ್ಭದಲ್ಲಿ ನಿಂತು ಹಿಂದಿನ 75 ವರ್ಷಗಳನ್ನು ಮೆಲುಕು ಹಾಕಿದರೆ ನಾವೆಷ್ಟು ದೂರ ಸಾಗಿದ್ದೇವೆ ಅನ್ನೋದು ಅರಿವಾಗುತ್ತದೆ. ಹಲವು ಅಡೆ ತಡೆಗಳನ್ನು ಮೆಟ್ಟಿ ನಿಂತು ಒಗ್ಗಟ್ಟಾಗಿ ಹೋರಾಡಿದ್ದೇವೆ. ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಿದ್ದೇವೆ. ನೋವು ನಲಿವುಗಳನ್ನು ಸಮನಾಗಿ ಹಂಚಿದ್ದೇವೆ ಎಂದರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ ಕಂಡು ದೇಶವೇ ಹೆಮ್ಮೆ ಪಡುತ್ತಿದೆ. ಹಾಗಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತಷ್ಟು ವಿಶೇಷವಾಗಿದೆ. 121 ವರ್ಷಗಳ ಬಳಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ನಮ್ಮ ದೇಶದಿಂದ ಅತೀ ಹೆಚ್ಚು ಕ್ರೀಡಾಪಟುಗಳನ್ನು ಕಳುಹಿಸಿದ್ದೇವೆ ಅವರು ಉತ್ತಮ ಸಾಧನೆ ತೋರಿ ಪದಕ ಬೇಟೆಯಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದರು.