ಇಂದಿನಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಮಾಲಾಧಾರಿಗಳು 2 ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ.
ಎರಡು ತಿಂಗಳ ಕಾಲ ನಡೆಯುವ ಮಂಡಲ-ಮಕರವಿಳಕ್ಕು(ಮಕರ ಸಂಕ್ರಾಂತಿ)ಗಾಗಿ ಶಬರಿಮಲೆ ಬೆಟ್ಟದ ದೇಗುಲವನ್ನು ಸೋಮವಾರ ಸಂಜೆ ತೆರೆಯಲಾಗುವುದು ಮತ್ತು ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಂಡಲಾಗುತ್ತೆ.
ಮಂಡಲಪೂಜೆಗಾಗಿ ದೇವಸ್ಥಾನವನ್ನು ಡಿಸೆಂಬರ್ 26 ರವರೆಗೆ ತೆರೆದಿದ್ದು, ಮಕರವಿಳಕ್ಕು ಉತ್ಸವಕ್ಕಾಗಿ ಜನವರಿ 20 ರವರೆಗೆ ಭಕ್ತರಿಗೆ ದೇವಾಲಯದ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ನವೆಂಬರ್ 16 ರಂದು ಪಾದಯಾತ್ರೆ ಆರಂಭವಾಗಲಿದ್ದು, ಸೋಮವಾರ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ಅವರ ಉಪಸ್ಥಿತಿಯಲ್ಲಿ ನಿರ್ಗಮಿತ ಅರ್ಚಕ ವಿ.ಕೆ.ಜಯರಾಜ್ ಪೊಟ್ಟಿ ಅವರು ದೇವಾಲಯದ ಗರ್ಭಗುಡಿಯನ್ನು ತೆರೆಯಲಿದ್ದಾರೆ.
ಕೋವಿಡ್-19 ಪ್ರೋಟೋಕಾಲ್ಗೆ ಬದ್ಧವಾಗಿ ತೀರ್ಥಯಾತ್ರೆ ನಡೆಯಲಿದೆ. ದೇಗುಲಕ್ಕೆ ಭೇಟಿ ನೀಡುವ 72 ಗಂಟೆಗಳ ಒಳಗೆ ಕೋವಿಡ್-19 ಲಸಿಕೆಯ ಎರಡು ಡೋಸ್ ಕಡ್ಡಾಯವಾಗಿದೆ. ಭಕ್ತರು ಅವರ ಮೂಲ ಆಧಾರ್ ಕಾರ್ಡ್ಗಳನ್ನು ಸಹ ನೀಡಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಈ ಬಾರಿ ಶಬರಿಮಲೆ ಯಾತ್ರೆಗೆ ಪ್ರತಿ ದಿನ ತಲಾ 25 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಒಟ್ಟಾರೆ 15.25 ಲಕ್ಷ ಭಕ್ತರಿಗೆ ಮಣಿಕಂಠನ ದರ್ಶನ ಭಾಗ್ಯ ದೊರಕಲಿದೆ. ಈ ಬಾರಿ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳಲು ಮುಂಚಿತವಾಗಿಯೇ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.