ಗ್ಲಾಸ್ಗೋದಲ್ಲಿ ನಡೆದ ಕೋಪ್ 26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದು, ಪರಿಸರ ಉಳಿಸಲು ಭಾರತ ಕೈಗೊಳ್ಳಲಿರುವ ಪಂಚ ಸೂತ್ರಗಳ ಬಗ್ಗೆ ತಿಳಿಸಿದ್ದಾರೆ.
ವಿಶ್ವದ ಜನಸಂಖ್ಯೆಯಲ್ಲಿ ಭಾರತ ಶೇ.17 ರಷ್ಟು ಪ್ರತಿಶತ ಜನಸಂಖ್ಯೆಯನ್ನು ಹೊಂದಿದ್ದು,ಇದರಿಂದ ಶೇ.5 ರಷ್ಟು ಮಾತ್ರ ಇಂಧನ ಹೊರಸೂಸುವಿಕೆಯಾಗುತ್ತಿದೆ.
ಭಾರತ 2070ರ ಹೊತ್ತಿಗೆ ಶೂನ್ಯ ನಿವ್ವಳ ಗುರಿಯೊಂದಿಗೆ ಇಂಗಾಲ ಮುಕ್ತ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವ ಗುರಿ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಡೀ ಪ್ರಪಂಚವು ಭಾರತ ಏಕೈಕ ದೊಡ್ಡ ಆರ್ಥಿಕತೆ ಎಂದು ನಂಬುತ್ತದೆ. ದೊಡ್ಡ ಆರ್ಥಿಕತೆ ಹೊಂದಿದ ದೇಶವಾದರೂ ಪರಿಸರಕ್ಕೆ ಹಾನಿಯಾಗದಂತ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಬ್ಬರೂ ಪರಿಸರ ಉಳಿಸಲು ಶ್ರಮಿಸುತ್ತಿದ್ದೇವೆ. ಇದರಿಂದ ಉತ್ತಮವಾದ ಫಲಿತಾಂಶವನ್ನೂ ಕಂಡಿದ್ದೇವೆ ಎಂದಿದ್ದಾರೆ.
ಇಂದು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಪಳೆಯುಳಿಕೆ ಅಲ್ಲದ ಇಂಧನ ಶಕ್ತಿ ಶೇ.25ಕ್ಕಿಂತ ಹೆಚ್ಚಾಗಿದ್ದು, ಇದೀಗ 40 ಪ್ರತಿಶತ ತಲುಪಿದೆ ಎಂದಿದ್ದಾರೆ.
ಪ್ರಪಂಚದ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು, ಪ್ರತೀ ವರ್ಷ ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ಈ ಬೃಹತ್ ರೈಲ್ವೆ ವ್ಯವಸ್ಥೆ 2030ರ ವೇಳೆಗೆ ತನ್ನನ್ನು ತಾನು ‘ನೆಟ್ ಝೀರೋ’ ಮಾಡುವ ಗುರಿಯನ್ನು ಹೊಂದಿದೆ. ಇದರಿಂದಾಗಿ ವಾರ್ಷಿಕವಾಗಿ 60 ಮಿಲಿಯನ್ ಟನ್ಗಳಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆಯಾಗಲಿದೆ ಎಂದಿದ್ದಾರೆ.
ಇದೇ ರೀತಿ ನಮ್ಮ ಬೃಹತ್ ಎಲ್ಇಡಿ ಬಲ್ಬ್ ಅಭಿಯಾನದಿಂದ ವಾರ್ಷಿಕವಾಗಿ 40ಮಿಲಿಯನ್ ಟನ್ಗಳಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆಯಾಗುತ್ತಿದೆ ಎಂದಿದ್ದಾರೆ.
ಕೋಪ್ 26 ನಲ್ಲಿ, ಸವಾಲುಗಳನ್ನು ಎದುರಿಸಲು ಅಮೃತದ ಐದು ಅಂಶಗಳಾದ ‘ಪಂಚಾಮೃತ’ವನ್ನು ಪ್ರಧಾನಿ ಮೋದಿ ಬಡಿಸಿದ್ದಾರೆ.
- 2030ರ ವೇಳೆಗೆ ಭಾರತದಲ್ಲಿ ಪಳೆಯುಳಿಕೆ ಅಲ್ಲದ ಇಂಧನ ಬಳಕೆಯನ್ನು 500 ಗಿಗಾ ವ್ಯಾಟ್ಗೆ ಏರಿಕೆ ಮಾಡಲಾಗುವುದು.
- ಭಾರತವು 2030ರ ವೇಳೆಗೆ ನವೀಕರಿಸಬಹುದಾದ ಶಕ್ತಿಯಿಂದ, ತನ್ನ ಶಕ್ತಿಯ ಅವಶ್ಯಕತೆಗಳಲ್ಲಿ ಶೇ. 50ರಷ್ಟು ಪ್ರತಿಶತವನ್ನು ಪೂರೈಸುತ್ತದೆ.
- 2030ರ ವೇಳೆಗೆ ಒಟ್ಟು ಯೋಜಿತ ಇಂಗಾಲ ಹೊರಸೂಸುವಿಕೆಯಿಂದ 1 ಬಿಲಿಯನ್ ಟನ್ಗಳಷ್ಟನ್ನು ಕಡಿಮೆ ಮಾಡುವುದು
- 2030ರ ವೇಳೆಗೆ ಭಾರತದಲ್ಲಿ ಇಂಗಾಲದ ಪ್ರಮಾಣವನ್ನು ಶೇ.45ರಷ್ಟು ಕಡಿಮೆ ಮಾಡುವುದು.
- ಭಾರತವು 2070ರ ಹೊತ್ತಿಗೆ ನಿವ್ವಳ ಶೂನ್ಯ ಅಂದರೆ ಸಂಪೂರ್ಣ ಇಂಗಾಲ ಮುಕ್ತ ರಾಷ್ಟ್ರವಾಗುವಂತೆ ಯೋಜನೆಗಳನ್ನು ಕೈಗೊಳ್ಳುವುದು.