ಹಲಿ: ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರು ಹೆಚ್ಚುತ್ತಿರುವ ಬೆನ್ನಲ್ಲೇ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಈ ಬಗ್ಗೆ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಈ ಮಧ್ಯೆ ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.
12 ರಾಜ್ಯ ಸರ್ಕಾರಗಳೊಂದಿಗೆ ಸಭೆ ವಿಸ್ತೃತ ಸಭೆ ನಡೆಸಿ, ಆಮ್ಲಜನಕ ಕೊರತೆ ಬಗ್ಗೆ ಪರಾಮರ್ಶಿಸಲಾಗಿದೆ. ಅಲ್ಲದೆ, ರಾಜ್ಯಗಳ ಅಗತ್ಯತೆಯನ್ನೂ ಕೇಳಲಾಗಿದೆ. ಒಟ್ಟು 6177 ಮೆಟ್ರಿಕ್ ಟನ್ ಆಕ್ಸಿಜನ್ಗಳನ್ನು ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ ರಾಜ್ಯಗಳು ಆಮ್ಲಜನಕ ಬೇಡಿಕೆಯನ್ನು ನಿಯಂತ್ರಣ ಮಾಡಬೇಕು. ಪೂರೈಕೆ ನಿರ್ವಹಣೆ ಎಷ್ಟು ಮುಖ್ಯವೋ.. ಬೇಡಿಕೆ ನಿರ್ವಹಣೆಯೂ ಅಷ್ಟೇ ಮುಖ್ಯ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಕೊರೊನಾ ಕೇಸ್ಗಳು ಹೆಚ್ಚಾದಂತೆ ದೇಶದ ಆರೋಗ್ಯ ಕ್ಷೇತ್ರಕ್ಕೆ, ಇಲ್ಲಿನ ಮೂಲಸೌಕರ್ಯಕ್ಕೆ ಸವಾಲು ಎದುರಾಗುತ್ತದೆ. ನಾವು ರಾಜ್ಯಸರ್ಕಾರಗಳೊಂದಿಗೆ ಸದಾ ಇದ್ದೇವೆ. ಆದರೆ ರಾಜ್ಯ ಸರ್ಕಾರಗಳು ಪೂರೈಕೆ ಮತ್ತು ಬೇಡಿಕೆಯ ನಿರ್ವಹಣೆ ಸರಿಯಾಗಿ ಮಾಡಬೇಕು. ಕೊವಿಡ್ -19 ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 9 ಕೈಗಾರಿಕೆಗಳನ್ನು ಹೊರತುಪಡಿಸಿ, ಉಳಿದ ಕೈಗಾರಿಕೆಗಳಿಗೆ ಏಪ್ರಿಲ್ 22ರಿಂದ ಆಕ್ಸಿಜನ್ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು. ವೈದ್ಯಕೀಯ ಆಮ್ಲಜನಕವನ್ನು ಹೆಚ್ಚೆಚ್ಚು ಪೂರೈಸುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅತಿಹೆಚ್ಚಿನ ಪ್ರಮಾಣದ ಆಕ್ಸಿಜನ್ ಅಂದರೆ ಸುಮಾರು 1500 ಮೆಟ್ರಿಕ್ ಟನ್ಗಳಷ್ಟನ್ನು ಮಹಾರಾಷ್ಟ್ರಕ್ಕೆ ನೀಡಲಾಗುವುದು, ದೆಹಲಿಗೆ 350 ಮೆಟ್ರಿಕ್ ಟನ್ ಮತ್ತು ಉತ್ತರ ಪ್ರದೇಶಕ್ಕೆ 800 ಮೆಟ್ರಿಕ್ ಟನ್ ಪೂರೈಕೆ ಮಾಡುವುದಾಗಿ ಪಿಯೂಷ್ ಗೋಯಲ್ ತಿಳಿಸಿದ್ದಾರೆ.