ಶಾಹಿದ್, ಅಲೀಘಢ್, ಒಮೆರ್ಟಾ ಹಾಗೂ ಛಲಾಂಗ್ ಖ್ಯಾತಿಯ ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ. ಅವರು ಆಕ್ಷನ್ ಕಟ್ ಹೇಳಿದ್ದ ಶಾಹಿದ್ ಚಿತ್ರಕ್ಕೆ 2013 ರಲ್ಲಿ ಅತ್ಯುತ್ತಮ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ದೊರೆತಿತ್ತು. ಇನ್ನು ಕಳೆದ ವರ್ಷ ಅವರು ನಿರ್ದೇಶಿಸಿದ್ದ ಶೇರು ಮಾರುಕಟ್ಟೆಯ ಅತಿ ದೊಡ್ಡ ಹಗರಣದ ರೂವಾರಿ ಹರ್ಷದ್ ಮೆಹ್ತಾ ಜೀವನಾಧಾರಿತ ಸ್ಕ್ಯಾಮ್ 1992 ವೆಬ್ಸಿರೀಸ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಇಂತಹ ಹನ್ಸಲ್ ಮೆಹ್ತಾ ಸದ್ಯ ಛಾಪಾ ಕಾಗದ ಹಗರಣದ ರೂವಾರಿ ಕರೀಮ್ ಲಾಲಾ ತೆಲಗಿ ಜೀವನಾಧಾರಿತ ವೆಬ್ ಸರಣಿ ನಿರ್ದೇಶನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಇಂತಹ ಹನ್ಸಲ್ ಮೆಹ್ತಾ ದೇಶದಲ್ಲಿ ಕೋವಿಡ್ ಪ್ರಕರಣಗಳ ಗಣನೀಯ ಏರಿಕೆ ಬಗ್ಗೆ ವ್ಯಂಗ್ಯ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೌದು, ಇತ್ತೀಚೆಗಷ್ಟೇ ಭಾರತದಲ್ಲಿರುವಂತೆಯೇ ಪಾಕಿಸ್ತಾನದಲ್ಲೂ ಕೋವಿಡ್ ಪರಿಸ್ಥಿತಿ ಹದಗೆಟ್ಟಿದೆಯಾ ಎಂದು ಹೀಯಾಳಿಸುವ ರೀತಿಯಲ್ಲಿ ನಿರ್ದೇಶಕ ಹನ್ಸಲ್ ಮೆಹ್ತಾ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ದೇವ್ ಮೆಹ್ತಾ ಎಂಬ ಅಭಿಮಾನಿಯೊಬ್ಬ ನೀವು ಪಾಕಿಸ್ತಾನಕ್ಕೆ ಹೋಗಿ ಇರಲು ಬಯಸುತ್ತೀರಿ ಎನ್ನುವುದಾದರೆ, ಫಸ್ಟ್ ಕ್ಲಾಸ್ ಒನ್ ವೇ ಟಿಕೆಟ್ಗೆ ಆಗುವ ಖರ್ಚನ್ನು ನಾನೇ ಭರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದ. ಅದಕ್ಕೆ ಆತನ ಕಾಲೆಳೆಯಲು ಯತ್ನಿಸಿದ ನಿರ್ದೇಶಕ ಹನ್ಸಲ್ ಮೆಹ್ತಾ ನೀನೇ ಟಿಕೆಟ್ ಬುಕ್ ಮಾಡುವೆಯಾ ಅಥವಾ ನನ್ನ ಬ್ಯಾಂಕ್ ಅಕೌಂಟ್ ಮಾಹಿತಿ ನಿನಗೆ ಡೈರೆಕ್ಟ್ ಮೆಸೇಜ್ನಲ್ಲಿ ಕಳುಹಿಸಲಾ ಎಂದು ಕೇಳಿದ್ದರು.
ಅದು ಅಷ್ಟಕ್ಕೇ ನಿಲ್ಲದೇ ದೇವ್ ಮೆಹ್ತಾ ಕೂಡ ದಯವಿಟ್ಟು ಅಕೌಂಟ್ ಮಾಹಿತಿ ಕಳುಹಿಸಿ. ಹಾಗೇನಾದರೂ ನೀವು ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ ಬಂದರೆ ಆ ಟಿಕೆಟ್ ಹಣದ ಹತ್ತು ಪಟ್ಟು ಹಣವನ್ನು ನನಗೆ ನೀಡಬೇಕಾಗುತ್ತದೆ ಎಂದು ಕಿಚಾಯಿಸಿದ್ದ. ಆಗಲೂ ಸುಮ್ಮನಿರದೇ ನಿರ್ದೇಶಕ ಹನ್ಸಲ್ ಮೆಹ್ತಾ, ಮೊದಲು ಹಣ ಕಳುಹಿಸು ಅಮೇಲೆ ನಿಯಮಗಳನ್ನು ಹಾಕು ಎಂದು ಉತ್ತರಿಸಿದ್ದರು. ಅದನ್ನೇ ಗಂಭೀರವಾಗಿ ಪರಿಗಣಿಸಿದ ದೇವ್ ಮೆಹ್ತಾ, ಪಾಕಿಸ್ತಾನಕ್ಕೆ ನೇರ ವಿಮಾನ ಹಾರಾಟ ಸದ್ಯ ರದ್ದಾಗಿರುವ ಕಾರಣ, ಮುಂಬೈನಿಂದ ದುಬೈ ಹಾಗೂ ದುಬೈನಿಂದ ಕರಾಚಿಗೆ ಒನ್ ವೇ ಟಿಕೆಟ್ ಬುಕ್ ಮಾಡಿ ಅದರ ಫೋಟೋವನ್ನು ಹನ್ಸಲ್ ಮೆಹ್ತಾರಿಗೆ ಕಳುಹಿಸಿದ.
ಭಾರತಕ್ಕೆ ಪಾಕ್ ಹೋಲಿಸಿದ ಖ್ಯಾತ ನಿರ್ದೇಶಕ; ಪಾಕಿಸ್ತಾನಕ್ಕೆ ಏರ್ ಟಿಕೆಟ್ ಬುಕ್ ಮಾಡಿದ ಅಭಿಮಾನಿ!
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.