ನವದೆಹಲಿ: ದಿಲ್ಲಿಯಿಂದ ವಾರಣಾಸಿಗೆ ಪ್ರಯಾಣಿಸಬೇಕಾಗಿದ್ದ ಇಂಡಿಯೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೆಲ ಹೊತ್ತು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಬೆದರಿಕೆ ಬರುತ್ತಿದ್ದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಕರೆದೊಯ್ಯುವ ಕಾರ್ಯವೂ ನಡೆದಿತ್ತು. ಈ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ಗಗನಸಖಿ ಜೊತೆಗೆ ವಿಮಾನ ರೆಕ್ಕೆಯ ಮೇಲೆ ನಡೆದುಕೊಂಡು ಬರುತ್ತಿರುವುದು ಮತ್ತು ಪೈಲಟ್ ತುರ್ತು ದ್ವಾರದ ಮೂಲಕ ಜಾರಿಗೊಂಡು ಹೊರ ಬರುತ್ತಿರುವ ದೃಶ್ಯ ಇದೀಗ ಎಲ್ಲೆ ವೈರಲ್ ಆಗುತ್ತಿದೆ.
ಬಾಂಬ್ ಬೆದರಿಕೆ ಬರುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರ ತರಲಾಯಿತು. ಈ ವೇಳೆ ಇಂಡಿಗೋ ಸಿಬ್ಬಂದಿ ಮಹಿಳೆಯನ್ನು ಕೈಯಲ್ಲಿ ಹಿಡಿದುಕೊಂಡು ವಿಮಾನದ ರೆಕ್ಕೆ ಮೇಲೆ ನಿಧಾನವಾಗಿ ನಡೆದುಕೊಂಡು ಬಂದಿದ್ದಾರೆ.
ಮತ್ತೊಂದೆಡೆ ಎಮರ್ಜೆನ್ಸಿ ಬಾಗಿನಿಂದ ಹೊರ ಬಂದ ಪೈಲಟ್ ಜಾರಿಕೊಂಡು ಬಂದಿದ್ದಾರೆ. ಏರ್ಪೋರ್ಟ್ ಭದ್ರತಾ ಸಿಬ್ಬಂದಿ ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ.
ವಿಮಾನದಲ್ಲಿ 176 ಪ್ರಯಾಣಿಕರಿದ್ದರು ಎನ್ನಲಾಗಿದೆ. ಇನ್ನು ನಿನ್ನೆಯಷ್ಟೇ ಮುಂಬೈನ ಮುಂಬೈನಲ್ಲಿರುವ ತಾಜ್ ಹೋಟೆಲ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಕುರಿತು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಹಾಗಾಗಿ, ಮುಂಬೈ ತಾಜ್ ಹೋಟೆಲ್ ಹಾಗೂ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.