ರಾಜಸ್ಥಾನ: ದಲಿತ ಯುವಕನೋರ್ವನನ್ನು ಅಪಹರಿಸಿ ಹಗ್ಗದಲ್ಲಿ ಕೈ ಕಾಲು ಕಟ್ಟಿ ಥಳಿಸಿ ಕೊಂದು ಕ್ರೌರ್ಯ ಮರೆದಿರುವ ಘಟನೆ ರಾಜಸ್ಥಾನದ ಜುನ್ಜುನ್ ಜಿಲ್ಲೆಯಲ್ಲಿ ನಡೆದಿದೆ. ಈ ಅಮಾನವೀಯವಾಗಿ ಕೊಂದ ಆರೋಪಿಗಳಾದ ದೀಪೇಂದ್ರ ಅಲಿಯಾಸ್ ಚಿಂಟು ರಜಪೂತ್, ಪ್ರವೀಣ್ ಅಲಿಯಾಸ್ ಪಿಕೆ ಮೇಘವಾಲ್, ಪ್ರವೀಣ್ ಅಲಿಯಾಸ್ ಬಾಬಾ ಮೇಘವಾಲ್, ಸುಭಾಷ್ ಅಲಿಯಾಸ್ ಚಿಂಟು ಮೇಘವಾಲ್, ಮತ್ತು ಸತೀಶ್ ಅಲಿಯಾಸ್ ಸುಖ ಮೇಘವಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮೇಶ್ವರ ವಾಲ್ಮೀಕಿ ಭೀಕರವಾಗಿ ಹತ್ಯೆಯಾದ ಯುವಕ. ಈ ಕ್ರೂರ ಘಟನೆಯ ವಿಡಿಯೋವನ್ನು ಸ್ವತಃ ಕೊಲೆಗಾರರೇ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇದನ್ನು ಆಪ್ ಮುಖಂಡ ಸಂಜಯ್ ಸಿಂಗ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಇದು ರಾಜಸ್ಥಾನದಲ್ಲಿ ಡಬಲ್ ಎಂಜಿನ್ ಸರ್ಕಾರದ ನೈಜ ಸ್ಥಿತಿ. ದಲಿತರ ಮೀಸಲಾತಿ ಕಿತ್ತುಕೊಂಡು ಅವರನ್ನು ಹೊಡೆದು ಬಡಿದು ಕೊಲ್ಲಲು ಬಿಜೆಪಿಗೆ 400 ಸ್ಥಾನಗಳು ಬೇಕಾಗಿವೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಘಟನೆ ವಿವರ:
ಮೇ 14 ರಂದು ಜುನ್ಜನ್ ಜಿಲ್ಲೆಯ ಬಲೋಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಕ್ರಮ ಮದ್ಯ ದಂಧೆಕೋರರು ರಾಮೇಶ್ವರ ವಾಲ್ಮೀಕಿ ಎಂಬ ಯುವಕನನ್ನು ಅಪಹರಿಸಿ, ಬಳಿಕ ನಾಲ್ಕೈದು ಜನ ಸೇರಿಕೊಂಡು ಆತನ ಕೈ ಮತ್ತು ಕಾಲುಗಳನ್ನು ಕಟ್ಟಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ತಮ್ಮ ದುಷ್ಕೃತ್ಯದ ವಿಡಿಯೋವನ್ನೂ ಮಾಡಿದ್ದಾರೆ. ವಿಡಿಯೋದಲ್ಲಿ ವಾಲ್ಮೀಕಿಯ ಕಾಲುಗಳನ್ನು ಹಗ್ಗದಿಂದ ಒಂದು ರಾಡ್ಗೆ ಕಟ್ಟಿ ಮತ್ತೊಬ್ಬ ಆತನ ಕೈಗಳನ್ನು ಹಿಡಿದಿರುತ್ತಾನೆ. ಮತ್ತೊಬ್ಬ ಕಿಡಿಗೇಡಿ ಕೋಲಿನಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಲ್ಮೀಕಿ ಕೊನೆಯುಸಿರೆಳೆದಿದ್ದಾರೆ.