ಮೈಸೂರು: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 5ನೇ ಟೆನಿಕಾಯ್ಟ್ (ರಿಂಗ್ ಎಸೆತ) ವಿಶ್ವ ಕಪ್ ನಲ್ಲಿ ಭಾರತ ತಂಡದಿಂದ ಆಯ್ಕೆಯಾಗಿದ್ದ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು ಕ್ಯಾತನಹಳ್ಳಿಯ ಲಿಖಿತ ಅವರಿಗೆ ಮೈಸೂರಿನ ಮಂಚೇಗೌಡನ ಕೊಪ್ಪಲಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಭಿನಂದನೆ ಸಲ್ಲಿಸಿ ಪ್ರೋತ್ಸಾಹ ಧನ ನೀಡಲಾಯಿತು.
ಈ ವೇಳೆ ಮಾತನಾಡಿದ ಎಸಿಪಿ ಗಜೇಂದ್ರ ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಜ್ಞಾನ ಎಷ್ಟು ಮುಖ್ಯವೋ ನಿಮ್ಮಗಳ ಸರ್ವಾಂಗೀಣ ಬೆಳವಣಿಗೆ, ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆ ಅತಿ ಮುಖ್ಯ ಎಂದು ಕಿವಿ ಮಾತು ಹೇಳಿದರಲ್ಲದೆ, ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದಿರುವ ಲಿಖಿತ ಅವರನ್ನು ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಓದುವುದರ ಜೊತೆಗೆ ಕ್ರೀಡೆಯೂ ಇರಬೇಕು. ಕ್ರೀಡೆ ನಮಗೆ ಉಪಯೋಗಕ್ಕೆ ಬಾರದ ಚಟುವಟಿಕೆ ಎಂಬ ಭಾವನೆ ಬಹಳಷ್ಟು ಮಂದಿ ವಿದ್ಯಾರ್ಥಿಗಳಲ್ಲಿದೆ ಜೊತೆಗೆ ಪೋಷಕರು ಕೂಡ ತಮ್ಮ ಮಕ್ಕಳಲ್ಲಿ ಇದನ್ನೇ ತಲೆ ತುಂಬುತ್ತಾರೆ ಇದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕ್ರೀಡೆಯಲ್ಲೇ ಉತ್ತಮ ಭವಿಷ್ಯ ರೂಪಿಸಿಕೊಂಡವರು ಇದ್ದಾರೆ. ಮಾನವ ಸಂಪನ್ಮೂಲದಲ್ಲಿ ಚೀನಾ ದೇಶಕ್ಕೆ ಹತ್ತಿರ ನಮ್ಮ ದೇಶವು ಇದೆ ಆದರೆ ಕ್ರೀಡೆಯಲ್ಲಿ ನಮ್ಮ ಸಾಧನೆ ಕಡಿಮೆ ಇದೆ ಎಂದು ವಿಷಾದಿಸಿದರು. ಹೆಸರೇ ಕೇಳಿರದಂತಹ ರಾಷ್ಟ್ರಗಳು ಕೂಡ ಕ್ರೀಡೆಯಲ್ಲಿ ಮುಂದಿವೆ, ಆದರೆ ನಮ್ಮಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ, ಇತೀಚೆಗೆ ಆದಾಯದ ಮೂಲದ ಕಾರ್ಯಕ್ರಮವಾಗಿ ಪರಿಣಮಿಸಿದೆ ಎಂದು ಗಜೇಂದ್ರ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರವಿ ಮಂಜೇಗೌಡನ ಕೊಪ್ಪಲು, ಪ್ರಾಂಶುಪಾಲರಾದ ಶಿವಮಲ್ಲು, ಸಾಹಿತಿಗಳಾದ ಪ್ರಕಾಶ್ ಜಿ ಹಳ್ಳಿ, ಲಿಖಿತಾ ರವರ ತಂದೆ ಕ್ಯಾತನ ಹಳ್ಳಿ ಕಾಂಗ್ರೆಸ್ ಮುಖಂಡರಾದ ಕೇಬಲ್ ನಾಗರಾಜ್, ಕೃಷ್ಣ, ಮತ್ತು ಶ್ವೇತಾ, ಹಾಗೂ ಶಾಲೆಯ ಶಿಕ್ಷಕರು ಇದ್ದರು.