ಮುಂಬೈ: ಭಾರತ ಕಂಡ ಅದ್ಭುತ ಆಟಗಾರ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕ್ರೇತ್ರದಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ. ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರ ಮುಡಿಗೆ ಈಗ ಮತ್ತೊಂದು ಕಿರೀಟ ದೊರಕಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ. ಇದು ಹೊಸ ಆಟಗಾರರಿಗೆ ಸ್ಫೂರ್ತಿ ನೀಡುವ ಪ್ರತಿಮೆಯಾಗಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ಬುಧವಾರ ಅನಾವರಣ ಮಾಡಿದೆ. ‘ಭಾರತ ರತ್ನ’ ಸಚಿನ್ ತೆಂಡೂಲ್ಕರ್ ಅವರು ಈ ಅನಾವರಣ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಚಿನ್ ಪ್ರತಿಮೆಯನ್ನು ಅನಾವರಣಗೊಳಿಸಿದರು.
ತೆಂಡೂಲ್ಕರ್ ಅವರ ಪ್ರತಿಮೆ 22 ಅಡಿ ಉದ್ದವಿದ್ದು, ಹೆಸರಾಂತ ಚಿತ್ರಕಲಾವಿದ, ಶಿಲ್ಪಿ ಪ್ರಮೋದ್ ಕಾಳೆ ಅವರು ನಿರ್ಮಿಸಿದ್ದಾರೆ. ಎತ್ತರ 10 ಅಡಿ ಮತ್ತು ಅವರ ಕೈಯಲ್ಲಿ 4 ಅಡಿಯ ಬ್ಯಾಟ್ ಇದೆ. ಅದರ ಮೇಲೆ ಸಚಿನ್ ಅವರ ಪೂರ್ಣ ಹೆಸರನ್ನು ಬರೆಯಲಾಗಿದೆ. ಸಚಿನ್ ಸಿಕ್ಸರ್ ಬಾರಿಸುವ ಭಂಗಿಯಲ್ಲಿ ಪ್ರತಿಮೆ ಇದೆ.