ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಅಫ್ಗಾನಿಸ್ಥಾನ ತಂಡದ ವಿರುದ್ಧ ಆತಿಥೇಯ ಭಾರತ 8 ವಿಕೆಟ್ ಗಳ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ಥಾನ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು, 272 ರನ್ ಪಡೆಯಿತು.
ಭಾರತ 35 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಸಾಧಿಸಿತು. ಇದೀಗ ಅಕ್ಟೋಬರ್ 14 ರಂದು ನಡೆಯಲ್ಲಿರುವ ಹೈವೋಲ್ಟೇಜ್ ಕದನದಲ್ಲಿ ರೋಹಿತ್ ಪಡೆ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಬಾಬರ್ ಪಡೆ ಈಗಾಗಲೇ ಅಹಮದಾಬಾದ್ ತಲುಪಿದೆ. ಟೀಂ ಇಂಡಿಯಾ ಕೂಡ ಇಷ್ಟರಲ್ಲೇ ಅಹಮದಾಬಾದ್ಗೆ ತೆರಳಲಿದೆ. ಈ ನಡುವೆ ಟೀಂ ಇಂಡಿಯಾ ಪಾಳಯದಿಂದ ಶುಭ ಸುದ್ದಿ ಹೊರಬಿದ್ದಿದ್ದು, ಡೆಂಗ್ಯೂಗೆ ತುತ್ತಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಇದೀಗ ತಂಡವನ್ನು ಸೇರಿಕೊಳ್ಳಲು ಅಹಮದಾಬಾದ್ಗೆ ಬಂದಿಳಿದಿದ್ದಾರೆ.
ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸುವುದಕ್ಕೂ ಮುನ್ನವೇ ಶುಭ್ಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೊದಲ 2 ಪಂದ್ಯಗಳಿಂದ ಹೊರಗಿಡಲಾಗಿತ್ತು. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಗಿಲ್ರನ್ನು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ ಕೆಲವು ಗಂಟೆಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.
ಶುಭ್ಮನ್ ಗಿಲ್ ಆರೋಗ್ಯವಾಗಿದ್ದು, ಅಹಮದಾಬಾದ್ಗೆ ಬಂದಿಳಿದಿದ್ದಾರೆ. ಆದರೆ ಗಿಲ್ ಚೇತರಿಸಿಕೊಂಡಿದ್ದರೂ ಗುರುವಾರ ಅಭ್ಯಾಸ ನಡೆಸುವುದಿಲ್ಲ ಎಂಬುದು ಸುದ್ದಿ. ಹಾಗಿದ್ದಲ್ಲಿ, ಪಾಕಿಸ್ತಾನದ ವಿರುದ್ಧ ಆಡುವುದು ಅವರಿಗೆ ಕಷ್ಟಕರವೆಂದು ತೋರುತ್ತದೆ. ಏಕೆಂದರೆ ಅವರ ಸ್ಥಾನದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡದ ಆಡಳಿತ ಮಂಡಳಿ ಗಿಲ್ ವಿಚಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಗಿಲ್ ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ತಂಡದಲ್ಲಿ ಆಡಿಸಲು ತೀರ್ಮಾನಿಸಿದೆ.
So the @ShubmanGill reached Ahemdabad ,hope he will be fine soon and deliver good news asap #WorldCup2023 pic.twitter.com/f7NC1JR1KU
— vipul kashyap (@kashyapvipul) October 11, 2023