ಮುಂಬೈ: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಶುರುವಾಗಲಿದೆ. ಎರಡು ಪಂದ್ಯಗಳ ಈ ಸರಣಿಯಿಂದ ಟೀಮ್ ಇಂಡಿಯಾದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಹೊರಗುಳಿದಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ಅವರ ಬಲಗೈ ಬೆರಳಿಗೆ ಗಾಯವಾಗಿತ್ತು. ಈ ಗಾಯದಿಂದ ರುತುರಾಜ್ ಗಾಯಕ್ವಾಡ್ ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಇದೀಗ ಅವರ ಬದಲಿಗೆ ಪಶ್ಚಿಮ ಬಂಗಾಳದ ಬ್ಯಾಟರ್ ಅಭಿಮನ್ಯು ಈಶ್ವರನ್ಗೆ ಬುಲಾವ್ ನೀಡಲಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತ ಎ ತಂಡದಲ್ಲಿರುವ ಅಭಿಮನ್ಯು ಸೌತ್ ಆಫ್ರಿಕಾದಲ್ಲೇ ಇದ್ದು, ಹೀಗಾಗಿ ರುತುರಾಜ್ ಬದಲಿಗೆ ಅವರನ್ನೇ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಇನ್ನು ಅಭಿಮನ್ಯು ಈಶ್ವರನ್ ಈ ಹಿಂದೆಯೂ ಟೀಮ್ ಇಂಡಿಯಾ ಟೆಸ್ಟ್ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಭಾರತ ತಂಡದ ಪಾದಾರ್ಪಣೆ ಮಾಡುವ ಅವಕಾಶ ದೊರೆತಿರಲಿಲ್ಲ. ಇದೀಗ ವರ್ಷಗಳ ಬಳಿಕ ಮತ್ತೆ ತಂಡದಲ್ಲಿ ಚಾನ್ಸ್ ಸಿಕ್ಕಿದೆ. ಇದನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.