ದುಬೈ: ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಎಂಟು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಇಂದು ನಡೆದ ಐಪಿಎಲ್ ನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಆರು ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತು. ಇದಕ್ಕೆ ಉತ್ತರಿಸಿದ ಬೆಂಗಳೂರು, ಡಿ ವಿಲಿಯರ್ಸ್ ಆಕ್ರಮಣಕಾರಿ ಆಟದಿಂದ 19.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ತನ್ನದಾಗಿಸಿಕೊಂಡಿತು.
ಕೊನೆಯ ಎರಡು ಓವರ್ ಗಳಲ್ಲಿ ಬೇಕಿದ್ದ 35 ರನ್ ಗಳನ್ನು ವಿಲಿಯರ್ಸ್ ಮತ್ತು ಗುರುಕೀರತ್ ಸಿಂಗ್ ಮಾನ್(19) ಪೂರೈಸಿದರು. ವಿಲಿಯರ್ಸ್ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 55 ರನ್ ಬಾರಿಸಿದರು. ಮಾನ್ 17 ಎಸೆತಗಳಲ್ಲಿ ಒಂದು ಬೌಂಡರಿ ಜತೆಗೆ 19 ರನ್ ಸಿಡಿಸಿದರು.
ಇದಕ್ಕೆ ಮೊದಲು ನಾಯಕ ಕೊಹ್ಲಿ 32 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಜತೆಗೆ 43 ರನ್ ಸಿಡಿಸಿದರು.
ರಾಜಸ್ಥಾನ ಆರಂಭಿಕ ರಾಬಿನ್ ಉತ್ತಪ್ಪ 42, ಸ್ಟೀವನ್ ಸ್ಮಿತ್ 57 ಮತ್ತು ಜೋಸ್ ಬಟ್ಲರ್ 24 ರನ್ ನೆರವಿನಿಂದ 177 ರನ್ ಪೇರಿಸಿತು.