ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ ಅವರ ಪತ್ನಿ ಹಾಗೂ ಮಕ್ಕಳನ್ನು ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಕೇಪ್ ಟೌನ್ ವಿಮಾನವೇರಲು ಬಿಡದಿರುವ ಘಟನೆ ನಡೆದಿದೆ.
ಧವನ್ ಪತ್ನಿ ಏಶಾ ಮತ್ತು ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ಇತರ ಕೆಲವೊಂದು ದಾಖಲೆಗಳನ್ನು ದುಬೈಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಕೇಳಿದರು. ಆದರೆ ಇದು ಶಿಖರ್ ಧವನ್ ಕುಟುಂಬದ ಬಳಿ ಇರಲಿಲ್ಲ. ಇದರಿಂದ ಕೇಪ್ ಟೌನ್ ಗೆ ತೆರಳುವ ವಿಮಾನವೇರದಂತೆ ಧವನ್ ಕುಟುಂಬವನ್ನು ತಡೆಹಿಡಿಯಲಾಯಿತು. ಗಂಟೆಗಟ್ಟಲೆ ಅವರು ದುಬೈ ವಿಮಾನ ನಿಲ್ದಾಣದಲ್ಲಿ ಕಾಯಬೇಕಾಯಿತು.
ದೆಹಲಿಯಿಂದ ದಾಖಲೆಗಳು ಬಂದ ಬಳಿಕ ಧವನ್ ಕುಟುಂಬಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಯಿತಾದರೂ ಹೋಗಬೇಕಾಗಿದ್ದ ವಿಮಾನ ಮಾತ್ರ ತಪ್ಪಿತ್ತು. ಇದರ ಬಗ್ಗೆ ಧವನ್ ಟ್ವಿಟ್ಟರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ವೃತ್ತಿಪರವಲ್ಲದ ನಡವಳಿಕೆ. ನಾನು ದುಬೈ ಮೂಲಕ ಕೇಪ್ ಟೌನ್ ಗೆ ಹೋಗಬೇಕಾಗಿತ್ತು. ನನ್ನ ಕುಟುಂಬದವರ ಜನನ ಪ್ರಮಾಣ ಪತ್ರ ಮತ್ತು ಇತರ ದಾಖಲೆ ಕೇಳಿದರು. ಅದು ಆ ಕ್ಷಣದಲ್ಲಿ ನಮ್ಮ ಬಳಿ ಇರಲಿಲ್ಲ ಎಂದು ಅವರು ಮೊದಲ ಟ್ವೀಟ್ ನಲ್ಲಿ ಬರೆದಿದ್ದಾರೆ.
ಜ. 5ರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಮೂರು ಟೆಸ್ಟ್, ಆರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳು ನಡೆಯಲಿದೆ.