News Karnataka Kannada
Saturday, April 27 2024
ಸಂಪಾದಕರ ಆಯ್ಕೆ

ಅಲ್ಯುಮಿನಿಯಂ ಏಣಿ ಜೀವ ತೆಗೆಯಬಹುದು ಹುಷಾರ್!

Yeni
Photo Credit : News Kannada

ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕೃಷಿಕರಿಗೆ ಏಣಿ ಬಹುಪಯೋಗಿಯಾಗಿದ್ದು, ಒಂದಲ್ಲ ಒಂದು ಚಟುವಟಿಕೆಗೆ ಏಣಿ ಅತಿ ಅವಶ್ಯಕವಾಗಿದೆ.

ಮರಹತ್ತಲು, ಸೊಪ್ಪುಕೊಚ್ಚಲು, ಕರಿಮೆಣಸು ಕೊಯ್ಲು ಮಾಡಲು ಹೀಗೆ ಹಲವಾರು ರೀತಿಯ ಕೆಲಸಕ್ಕೆ ಏಣಿಯನ್ನು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಕೊಡಗಿನಲ್ಲಿ ಕರಿಮೆಣಸು ಕೊಯ್ಲುಗೆ, ಮರಕಪಾತ್ ಗೆ ಏಣಿ ಬೇಕೇ ಬೇಕು. ಆದರೆ ಈ ಏಣಿಯನ್ನು ಜಾಗರೂಕತೆಯಿಂದ ಬಳಸದ ಕಾರಣದಿಂದಾಗಿ ಜೀವಹಾನಿಗಳು ಸಂಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ.

ಹಿಂದೆ ಮರಕ್ಕೆ ಹಬ್ಬಿ ಬೆಳೆಯುವ ಬಳ್ಳಿಯಿಂದ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಬಿದಿರು ಮೆಳೆಗಳಿಂದ ಉತ್ತಮವಾದ ಬಿದಿರನ್ನು ಕಡಿದು ಅದರಿಂದ ಏಣಿ ಮಾಡಿಟ್ಟುಕೊಳ್ಳುತ್ತಿದ್ದರು. ಅದು ಒಂದಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು. ಆದರೆ ಬಿದಿರುಮೆಳೆಗಳು ನಾಶವಾದ ಬಳಿಕ ಬಿದಿರು ಏಣಿಗಳು ಮಾಯವಾಗಿದ್ದು, ಈಗ ರೈತರ ಅನುಕೂಲಕ್ಕಾಗಿ ಅಲ್ಯುಮಿನಿಯಂ ಏಣಿಗಳು ಬಂದಿವೆ. ಇವು ಹಗುರವಾಗಿರುವುದರೊಂದಿಗೆ ಬಳಕೆಗೆ ಅನುಕೂಲವಾಗಿದೆ.

ಆದರೆ ಇಲ್ಲಿ ಸಮಸ್ಯೆಯಾಗುತ್ತಿರುವುದು ಮುಂಜಾಗ್ರತೆಯ ಕೊರತೆಯಿಂದ ಎಂದರೆ ತಪ್ಪಾಗಲಾರದು. ಏಕೆಂದರೆ ಮಲೆನಾಡು ಪ್ರದೇಶ ಗುಡ್ಡಕಾಡಿನಿಂದ ಕೂಡಿದ್ದು, ಈ ಪ್ರದೇಶಗಳಲ್ಲಿ ಕಾಫಿ, ಅಡಿಕೆ ತೋಟಗಳಿದ್ದು ಈ ತೋಟಗಳ ನಡುವೆಯೇ ಒಂದೆಡೆಯಿಂದ ಮತ್ತೊಂದೆಡೆಗೆ ವಿದ್ಯುತ್ ಸಂಪರ್ಕ ಹಾದು ಹೋಗಿವೆ.

ಈ ತಂತಿಗಳು ವರ್ಷದಿಂದ ವರ್ಷಕ್ಕೆ ಜೋತು ಬೀಳುತ್ತಿವೆ. ಮಳೆಗಾಲದಲ್ಲಿ ತಂತಿ ಮೇಲೆ ಮರದ ಕೊಂಬೆಗಳು ಬಿದ್ದು ತಂತಿ ತುಂಡಾಗುವುದು ಮತ್ತು ಸರಿಪಡಿಸುವುದು ಹೀಗೆ ಆಗಾಗ್ಗೆ ಪುನರಾವರ್ತನೆಯಾಗುವುದರಿಂದ ತೋಟದ ನಡುವೆ ಕಂಬದಿಂದ ಕಂಬಕ್ಕೆ ಎಳೆದಿರುವ ತಂತಿಗಳು ಜೋತು ಬಿದ್ದಿದ್ದು ಅವುಗಳಿಂದ ತಪ್ಪಿಸಿಕೊಂಡು ಕೆಲಸ ಮಾಡುವುದೇ ಕಷ್ಟವಾಗುತ್ತಿದೆ.

ಪ್ರತಿ ವರ್ಷವೂ ಚೆಸ್ಕಾಂ ಸಿಬ್ಬಂದಿ ಇವುಗಳ ಬಗ್ಗೆ ಪರಿಶೀಲನೆ ನಡೆಸದ ಕಾರಣ ಮತ್ತು ಬೆಳೆಗಾರರು ಈ ಬಗ್ಗೆ ಸಂಬಂಧಿಸಿದವರ  ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುವುದರಿಂದ  ಈ ವಿದ್ಯುತ್ ತಂತಿಗಳಿಂದ ಅವಘಡ ಹೆಚ್ಚಾಗಿ ಸಂಭವಿಸುತ್ತದೆ.

ಕರಿಮೆಣಸು ಕೊಯ್ಲು, ಇನ್ನಿತರ ಕೆಲಸಗಳಿಗೆ ಏಣಿ ಬಳಕೆ ಮಾಡುವ ಸಂದರ್ಭ ಕಾರ್ಮಿಕರು ಮತ್ತು ಬೆಳೆಗಾರರು ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಅಲ್ಯುಮಿನಿಯಂ ಏಣಿಗಳು ಎಷ್ಟು ಉಪಯೋಗವಾಗಿವೆಯೋ ಅಷ್ಟೇ ಅಪಾಯವನ್ನು ತಂದೊಡ್ಡುತ್ತಿವೆ.

ಕಳೆದ ಐದಾರು ವರ್ಷಗಳಲ್ಲಿ ಕರಿಮೆಣಸು ಕೊಯ್ಲು ಸಂದರ್ಭ ಏಣಿಯನ್ನು ಒಂದು ಬಳ್ಳಿಯಿಂದ ಮತ್ತೊಂದು ಬಳ್ಳಿಗೆ ಕೊಂಡೊಯ್ದು ಇಡುವಾಗ ಮರಗಳ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿವರ್ಷವೂ ಅರಿವು ಮೂಡಿಸುತ್ತಿದ್ದರೂ ಅಲ್ಲಲ್ಲಿ ಅವಘಡಗಳು ನಡೆಯುತ್ತಲೇ ಇವೆ.

ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿ ಬಗ್ಗೆ ಕೆಲಸಗಾರರ ಗಮನಕ್ಕೆ ತಂದರೂ ಕೆಲವೊಮ್ಮೆ ಕೆಲಸದ  ಅವಸರದಲ್ಲಿ ವಿದ್ಯುತ್ ತಂತಿಯನ್ನು ನೋಡದೆ ಏಣಿಯನ್ನು ಹೊತ್ತೊಯ್ಯುವಾಗ ತಂತಿಗೆ ತಗುಲಿ ಅವಘಡಗಳು ಸಂಭವಿಸುತ್ತಿವೆ.

ಈ ಬಗ್ಗೆ ಕಾರ್ಮಿಕರು ಕೂಡ ಸುತ್ತಮುತ್ತ ಗಮನಿಸಿಕೊಂಡು ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿದ್ದರೂ ಯಾರೂ ಕೂಡ ಇದರತ್ತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಪ್ರತಿವರ್ಷವೂ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಸಾಯುವುದು ನಡೆಯುತ್ತಲೇ ಇದೆ. ಇನ್ನಾದರೂ ತೋಟದ ನಡುವೆ ಏಣಿಯನ್ನು ಕೊಂಡೊಯ್ಯುವಾಗ ಎಚ್ಚರಿಕೆ ವಹಿಸಿ ಜೀವವನ್ನು ಕಾಪಾಡಿಕೊಳ್ಳಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು