ಕಾರ್ಕಳ: ಸಾಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಗೇಟಿನ ಮುಂಭಾಗದ ಪ್ರದೇಶದಲ್ಲಿ ಎರಡು ಮೋರಿಗಳ ಮಧ್ಯೆ ಅಪಾಯಕಾರಿ ಗುಂಡಿ ಸೃಷ್ಟಿಯಾಗಿರುವುದನ್ನು ತುರ್ತಾಗಿ ಸರಿಪಡಿಸಲಾಗಿದೆ.
ಇಂದು(ಜೂನ್ 14 ಶುಕ್ರವಾರ 2024) ಬೆಳಿಗ್ಗೆ 8:00 ಗಂಟೆಗೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ, ಬಿಲ್ಡ್ ಕಾನ್ ಕೆಲಸಗಾರರು ಕಾಂಕ್ರೀಟ್ ಮೋರಿ ನಡುವಿನ ಅಪಾಯಕಾರಿ ಗುಂಡಿಯನ್ನು ಮುಚ್ಚಿ ಸುರಕ್ಷಿತ ಸುಗಮ ಸಂಚಾರಕ್ಕೆ ಶಾಲಾ ಗೇಟಿನ ಮುಂಭಾಗದ ಪ್ರದೇಶವನ್ನು ಸಿದ್ಧಪಡಿಸಿದರು.
ಸಾಣೂರಿನ ಸ್ಥಳೀಯ ರಿಕ್ಷಾ ಚಾಲಕರು ಶಾಲಾ ಗೇಟಿನ ಮುಂಭಾಗದಲ್ಲಿ ಗುಂಡಿ ಬಿದ್ದಿರುವುದನ್ನು ಗಮನಿಸಿ ತುರ್ತಾಗಿ ದೊಡ್ಡ ಕಲ್ಲೊಂದನ್ನು ಅದರ ಮೇಲೆ ಇಟ್ಟು, ವಿದ್ಯಾರ್ಥಿಗಳು ಮತ್ತು ನಡೆದಾಡುವ ಜನರ ಕಾಲು ಗುಂಡಿಗೆ ಬೀಳದಂತೆ ವ್ಯವಸ್ಥೆಯನ್ನು ಮಾಡಿರುವುದು ಶ್ಲಾಘನೀಯ.
ಕಳೆದ ಮೂರು ನಾಲ್ಕು ದಿನಗಳಿಂದ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ಫೋನ್ ಮುಖಾಂತರ ಅಪಾಯಕಾರಿ ಗುಂಡಿಯ ಬಗ್ಗೆ ತಿಳಿಸಿದರೂ ಸ್ಪಂದಿಸದೆ ಅಸಡ್ಡೆ ತೋರಿದವರು… ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಆಕ್ರೋಶ ಪ್ರಕಟವಾದ ತಕ್ಷಣ ಕ್ರಮ ಕೈಗೊಂಡರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಸಂತೋಷ್ ಕುಮಾರ್ ರವರು ಗುಂಡಿಯನ್ನು ಮುಚ್ಚಿ ಸರಿಪಡಿಸಿದ ಬಳಿಕ ಫೋನ್ ಮಾಡಿ ಸರಿಪಡಿಸಲಾಗಿದೆ ಎಂದು ತಿಳಿಸಿ ಮುಂದೆ ಈ ರೀತಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಏನಾದರೂ ಲೋಪದೋಷ ಆಗಿ ಜನರ ಸುರಕ್ಷತೆಗೆ ಮತ್ತು ಸುಗಮ ಸಂಚಾರಕ್ಕೆ ತೊಂದರೆಯಾದರೆ ವಾಟ್ಸಪ್ ಮೂಲಕ ಫೋಟೋ ಮತ್ತು ವಿವರವನ್ನು ಹಾಕಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿರುತ್ತಾರೆ .