ಮೈಸೂರು: ಸಂಚಾರ ನಿಯಮ ಪಾಲನೆ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೈಸೂರು ನಗರ ಪೊಲೀಸರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ನಲ್ಲಿ ತೆರಳುವ ಮೂಲಕ ಸಾರ್ವಜನಿಕರಲ್ಲಿ ಸಂಚಾರ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಆರಂಭಗೊಂಡ ಜಾಥಾಗೆ ರೋಟರಿ ಮೈಸೂರು ಅಧ್ಯಕ್ಷ ಅರುಣ್ ಬೆಳವಾಡಿ ಚಾಲನೆ ನೀಡಿದರು. ಜಾಥಾ ಕೆ.ಆರ್.ವೃತ್ತ, ಡಿ.ದೇವರಾಜ ಅರಸ್ ರಸ್ತೆ, ಜೆಎಲ್ಬಿ ರಸ್ತೆ, ಇರ್ವೀನ್ ರಸ್ತೆ, ಬಿಎನ್ ರಸ್ತೆ, ಗನ್ ಹೌಸ್ ವೃತ್ತ, ಸಯ್ಯಜಿ ರಸ್ತೆ ಮೂಲಕ ಕೆ.ಆರ್. ವೃತ್ತ ಬಳಿಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸುವುದೇ ಪೊಲೀಸರ ಉದ್ದೇಶವಲ್ಲ. ಈ ಬಗ್ಗೆ ಜಾಗೃತಿ ಮೂಡಿಸಿ ಸಂಚಾರ ನಿಯಮ ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಜಾಥಾ ನಡೆಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಎಂ.ಮುತ್ತರಾಜು, ಜಾಹ್ನವಿ, ಎಸಿಪಿಗಳಾದ ಪರಶುರಾಮಪ್ಪ, ಶಾಂತಮಲ್ಲಪ್ಪ, ಗಜೇಂದ್ರ ಪ್ರಸಾದ್ ಸೇರಿದಂತೆ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿ ಇದ್ದರು.