ಮೈಸೂರು:ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುವ ಮೂಲಕ ದೈಹಿಕ, ಮಾನಸಿಕವಾಗಿ ಸದೃಢರಾಗಬೇಕು ಎಂದು ಮೇಯರ್ ಶಿವಕುಮಾರ್ ಸಲಹೆ ನೀಡಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸಮಾಜ ಕಾರ್ಯ ಅಧ್ಯಯನ ವಿಭಾಗ, ಪ್ರe ಫೌಂಡೇಶನ್ ಮತ್ತು ಲಿಯೋ ಕ್ಲಬ್ ಆಫ್ ಮೈಸೂರು ಪ್ಯಾಲೆಸ್ ಸಿಟಿ ಸಂಯುಕ್ತವಾಗಿ ಆಯೋಜಿಸಿರುವ ಎರಡು ದಿನಗಳ ಪತಂಗ-2023 ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಯೋಗ ನಗರಿ ಆಗಿದ್ದು, ಇಡೀ ವಿಶ್ವವೇ ನೋಡುತ್ತಿದೆ. ಯೋಗ ಮಾಡುವುದರಿಂದ ಓದಿನಲ್ಲಿ ಏಕಾಗ್ರತೆ ಬರುತ್ತದೆ. ನಿರಂತರವಾಗಿ ಯೋಗ ಮಾಡುವುದರಿಂದ ನಿಮ್ಮ ಎಲ್ಲಾ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ. ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ನಿಮ್ಮ ಪೋಷಕರು ಪ್ಲಾಸ್ಟಿಕ್ ಬಳಕೆ ತ್ಯಜಿಸಿ, ಬಟ್ಟೆ ಬ್ಯಾಗ್ಗಳನ್ನು ಬಳಸಬೇಕು. ಆ ಮೂಲಕ ಪರಿಸರ ಉಳಿಸಬೇಕು ಎಂದು ಅವರು ಕರೆ ನೀಡಿದರು.
ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು- ಗೆಲುವು ಸಹಜ. ಪಾಲಿಕೆಯಿಂದ ಕಲಾವಿದರನ್ನು ಪ್ರೋತ್ಸಾಹಿಸಲು ಸಲುವಾಗಿ ಪ್ರೋತ್ಸಾಹ ದನ ನೀಡಲಾಗುತ್ತಿದೆ ಎಂದರು. ನಂತರ ವಿದ್ಯಾರ್ಥಿಗಳಿಗಾಗಿ ಜನಪದ ನೃತ್ಯ, ಜನಪದ ಗೀತೆ, ಏಕಾಂಕ ನಾಟಕ, ಪ್ರಬಂಧ, ಆಶುಭಾಷಣ ಸ್ಪರ್ಧೆ, ಚಿತ್ರಕಲೆ, ರಂಗೋಲಿ, ಭಾವಗೀತೆ ಸ್ಪರ್ಧೆಗಳು ನಡೆಯಿತು.
ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷತೆ ಡಾ.ಎಚ್.ಪಿ. ಜ್ಯೋತಿ, ಸಹ ಪ್ರಾಧ್ಯಾಪಕ ಡಾ. ಚಂದ್ರಮೌಳಿ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ. ನಿಂಗಾಜಗೌಡ, ಲಿಯೋ ಜಿಲ್ಲಾ ಕಾರ್ಯಾಧ್ಯಕ್ಷ ಜಿ. ಶಿವಕುಮಾರ್ ಇದ್ದರು.