ಬೀದರ್: ಜುಲೈ 26 ಬಸವಕಲ್ಯಾಣ ತಾಲ್ಲೂಕಿನ ಧನ್ನೂರ (ಆರ್) ಗ್ರಾಮದ ಹಳ್ಳದಲ್ಲಿ ಸೋಮವಾರ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕ ಮಲ್ಲಪ್ಪ ಶರಣಪ್ಪ (26) ಪತ್ತೆಗಾಗಿ ಮಂಗಳವಾರ ಸಂಜೆಯವರೆಗೂ ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವು ಕಂಡು ಬಂದಿಲ್ಲ.
ಊರಿನ ಹೊರ ಭಾಗದಲ್ಲಿರುವ ಮನೆಗೆ ಹೋಗುವಾಗ ಹಳ್ಳದ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ಅದನ್ನು ನಡೆದುಕೊಂಡು ದಾಟಲು ಯತ್ನಿಸಿದ್ದಾನೆ.
ಆದರೆ ನೀರಿನ ರಭಸಕ್ಕೆ ಹಳ್ಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಪತ್ತೆ ಕಾರ್ಯ ಕೈಗೊಂಡರು. ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ತಹಶೀಲ್ದಾರ್ ಶಾಂತಗೌಡ ಬಿರಾದಾರ ಮತ್ತಿತರರು ಸ್ಥಳ್ಕಕೆ ಭೇಟಿ ನೀಡಿದ್ದಾರೆ.
ಅಗ್ನಿ ಶಾಮಕ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರವೀಣ ನೇತೃತ್ವದಲ್ಲಿ ಇಡೀ ದಿನ ಹಳ್ಳದಲ್ಲಿ ಹುಡುಕಾಟ ನಡೆದಿದೆ. ಠಾಣೆ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಮಂಜುನಾಥ, ಬಸವರಾಜ ಮತ್ತಿತರರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
‘ಹಳ್ಳದಲ್ಲಿ ಗಿಡಕಂಟೆಗಳು ಬಹಳಷ್ಟು ಬೆಳೆದಿವೆ. ಅಲ್ಲದೇ ಮಳೆ ನೀರಿನೊಂದಿಗೆ ಮಣ್ಣು ಸಹ ಕೊಚ್ಚಿಕೊಂಡು ಬಂದು ಅಲ್ಲಲ್ಲಿ ಸಂಗ್ರಹವಾಗಿದ್ದರಿಂದ ಯುವಕ ಎಲ್ಲಿ ಸಿಕ್ಕಿಕೊಂಡಿದ್ದಾನೆ ಎಂಬುದು ತಿಳಿಯದಾಗಿದೆ. ಅಗ್ನಿ ಶಾಮಕ ದಳದವರು ಹಾಗೂ ಗ್ರಾಮಸ್ಥರು ಎಷ್ಟೇ ಹುಡುಕಿದರೂ ಯುವಕ ಸಿಕ್ಕಿಲ್ಲ’ ಎಂದು ಸ್ಥಳದಲ್ಲಿದ್ದ ಗ್ರಾಮದ ರೈತ ಆನಂದ ತಿಳಿಸಿದ್ದಾರೆ.