ಮೈಸೂರು: ಸಾರ್ವಜನಿಕರ ಬಳಕೆಗೆ ಮೀಸಲಿಟ್ಟಿದ್ದ ಜಾಗವನ್ನು ಅತಿಕ್ರಮಿಸಿಕೊಂಡು ಕಾನೂನುಬಾಹಿರವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸಿದ್ದಲ್ಲದೆ, ಮೂರು ಕೋಟಿ ರೂ.ಬೆಲೆಬಾಳುವ ಆಸ್ತಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಮುಡಾ ಜಾಗವನ್ನು ತಮ್ಮದೆಂದು ವಾದಿಸುತ್ತಿದ್ದ ಭೂಗಳ್ಳರಿಗೆ ಛಾಟಿ ಬೀಸಿರುವ ಅಧಿಕಾರಿಗಳು ಬುಧವಾರ ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ಮೈಸೂರು ನಗರದ ಆರ್.ಎಸ್.ನಾಯ್ಡುನಗರ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಮುಡಾ ಜಾಗವನ್ನು ಅತಿಕ್ರಮಿಸಿಕೊಂಡಿದ್ದ ಭೂಗಳ್ಳರು ನಾಲ್ಕು ಕಟ್ಟಡಗಳನ್ನು ಮತ್ತು ಮತ್ತೊಂದು ಕಡೆಯಲ್ಲಿದ್ದ ನಿವೇಶನದಲ್ಲಿ ಎರಡು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರು. ಈ ಜಾಗ ಮುಡಾಕ್ಕೆ ಸೇರಿದ್ದು, ಅತಿಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆಯೆಂದು ಸಾರ್ವಜನಿಕರೊಬ್ಬರು ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಸ್ಥಳ ಪರಿಶೀಲನೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಹೀಗಾಗಿ, ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಆರ್.ಎಸ್.ನಾಯ್ಡುನಗರ ಬಸ್ ನಿಲ್ದಾಣದ ಹಿಂಭಾಗ ಇರುವ ಜಾಗ ಮುಡಾಕ್ಕೆ ಸೇರಿದ್ದೆಂದು ಕೊಟ್ಟ ವರದಿ ದೃಢಪಟ್ಟ ಹಿನ್ನಲೆಯಲ್ಲಿ ತೆರವುಗೊಳಿಸುವುದಕ್ಕೆ ನಿರ್ಧರಿಸಿದ್ದರು. ಅದರಂತೆ, ಬುಧವಾರ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ಜೆಸಿಬಿ, ಲಾರಿ, ಟಿಪ್ಪರ್ ಮೊದಲಾದ ವಾಹನಗಳನ್ನು ತೆಗೆದುಕೊಂಡು ಹೋಗಿ ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ಕಾರ್ಯಾಚರಣೆ ಶುರು ಮಾಡಿದರು.
ಸಾರ್ವಜನಿಕರು ಮನೆಯಿಂದ ಹೊರಗೆ ಬರುವ ಹೊತ್ತಲ್ಲಿ ಕಟ್ಟಡದ ಅರ್ಧಭಾಗವನ್ನು ನೆಲಸಮಗೊಳಿಸಿದ್ದ ಜೆಸಿಬಿ ಚಾಲಕರು ಸೂರ್ಯ ಮೂಡುವ ಹೊತ್ತಿಗೆ ಸಂಪೂರ್ಣವಾಗಿ ಕಟ್ಟಡಗಳನ್ನು ಕೆಳಕ್ಕೆ ಉರುಳಿಸಿ ಬಿಟ್ಟಿದ್ದರು. ಮಾಲೀಕರು ತಮ್ಮದೆಂದು ಹೇಳಿಕೊಂಡು ಬರುವ ಹೊತ್ತಿಗೆ ಅಧಿಕಾರಿಗಳು ತಮ್ಮ ಕೆಲಸ ಮುಗಿಸಿದ್ದರು.
ಆರ್.ಎಸ್.ನಾಯ್ಡುನಗರದಲ್ಲಿ ನಿವೇಶನದ ಬೆಲೆ ಗಗನಕ್ಕೇರಿದ್ದು, ಮುಡಾದ ಹಲವಾರು ನಿವೇಶನಗಳಿವೆ. ಇದರಲ್ಲಿ ನಿಲ್ದಾಣದ ಹಿಂಭಾಗ ಇರುವ ಆಸ್ತಿ ಮೂರು ಕೋಟಿ ರೂ.ಬೆಲೆಬಾಳುತ್ತದೆ. ನೆಲಸಮಗೊಳಿಸಿದ ಮೇಲೆ ಮುಡಾ ಆಸ್ತಿಯೆಂದು ನಾಮಫಲಕ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ತಮ್ಮದೆಂದು ಸಾರ್ವಜನಿಕರಿಗೆ ಹೇಳಿಕೊಂಡು ರಾಜಾರೋಷವಾಗಿ ಕಟ್ಟಡ ನಿರ್ಮಿಸಿದ್ದರು. ಆದರೆ, ಇದೀಗ ಈ ಜಾಗ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರಿಂದಾಗಿ ಮೂರು ಕೋಟಿ ರೂ.ಬೆಲೆಬಾಳುವ ಆಸ್ತಿ ಸುಪರ್ದಿಗೆ ಪಡೆದುಕೊಳ್ಳಲಾಗಿದೆ.