ಮೈಸೂರು: ಪ್ರಜ್ಞಾವಂತರ ಮತ ಕ್ಷೇತ್ರ ಎಂದೇ ಪರಿಗಣಿತವಾದ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಮತದಾರರು ಮತಪತ್ರದಲ್ಲಿ ತಮ್ಮ ಪಾಂಡಿತ್ಯ ಮೆರೆದಿದ್ದಾರೆ.
ಅರಿವು ಮೂಡಿಸಿದ್ದರೂ ಕ್ರಮಬದ್ಧವಾಗಿ ಮತ ಚಲಾಯಿಸಿಲ್ಲ. ಕೆಲವು ಮತಪತ್ರಗಳಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ಎಸ್ ಎಂದು ಕೆಲವು ಮತಪತ್ರಗಳಲ್ಲಿ ನೋ ಎಂದು ಬರೆದಿದ್ದಾರೆ. ಮತ್ತೊಂದು ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ಹಾಕಬೇಕು ಎಂದು ಬರೆಯಲಾಗಿತ್ತು. ಮತ್ತೆ ಕೆಲವರು ಇಂಗ್ಲಿಷ್ ಅಂಕಿ ಮತ್ತು ರೋಮನ ಅಂಕಿ ಎರಡನ್ನೂ ಬರೆದಿದ್ದಾರೆ.
ಇನ್ನೂ ಕೆಲವರು ಮೊದಲ ಪ್ರಾಶಸ್ತ್ಯದ ಮತ ಹಾಕಿ ಅದಕ್ಕೆ ಸೊನ್ನೆ ಸುತ್ತಿದ್ದಾರೆ. ಕೆಲವರು ದ್ವಿತೀಯ ಪ್ರಾಶಸ್ತ್ಯದ ಮತವನ್ನಷ್ಟೇ ಹಾಕಿದ್ದಾರೆ. ಕೆಲವೆಡೆ ರೈಟ್ ಮಾರ್ಕ್ ಮಾಡಿದ್ದಾರೆ. ಕೆಲವರು ಖಾಲಿ ಮತಪತ್ರವನ್ನೆ ಹಾಕಿದ್ದಾರೆ. ಕೆಲ ಮತಪತ್ರಗಳಲ್ಲಿ 1, 2 ಎಂದು ಮತ ಚಲಾಯಿಸಿದ್ದಾರೆ. ಕೆಲವು ಪುಣ್ಯಾತ್ಮರು ಮತ ಪತ್ರದ ಹಿಂಭಾಗದಲ್ಲಿ ಮತ ಚಲಾಯಿಸಿದ್ದಾರೆ.