ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಒಕ್ಕಲಿಗ ಸಮುದಾಯದ ಮುಖಂಡ ಜಿ.ಟಿ.ದೇವೇಗೌಡರು ರಾಜಕೀಯದ ಬಗ್ಗೆ ನಿರಾಸೆ ತಾಳಿರುವುದು ಮತ್ತು ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿರುವುದು ಅವರ ಬೆಂಬಲಿಗರಲ್ಲಿ ಬೇಸರ ತಂದಿದೆ. ಹೀಗಾಗಿ ಬೆಂಬಲಿಗರು, ಅಭಿಮಾನಿಗಳು, ಮತದಾರರು ರಾಜಕೀಯದಲ್ಲಿ ಮುಂದುವರೆಯುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹಾಗೆನೋಡಿದರೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಭಾವಿ ಮುಖಂಡರಾಗಿರುವ ಜಿ.ಟಿ.ದೇವೇಗೌಡರು ಇತ್ತೀಚೆಗಿನ ರಾಜಕೀಯ ವಿದ್ಯಮಾನದಿಂದ ಬೇಸತ್ತಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ತಮ್ಮ ಕ್ಷೇತ್ರದ ಅಭಿವೃದ್ಧಿಯತ್ತ ಸದಾ ಒಲವು ತೋರುತ್ತಿರುವ ಅವರನ್ನು ಮತದಾರರು ಬಿಟ್ಟುಕೊಡಲು ತಯಾರಿಲ್ಲ.
ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರ ಮತ್ತು ಹುಣಸೂರು ವ್ಯಾಪ್ತಿಯಲ್ಲಿ ಹಲವು ಮುಖಂಡರು ರಾಜಕೀಯದಿಂದ ನಿವೃತ್ತಿ ಹೊಂದದಂತೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಜಿ.ಟಿ.ದೇವೇಗೌಡರಿಂದ ಹಲವರು ರಾಜಕೀಯ ಜೀವನ ಕಂಡುಕೊಂಡಿದ್ದು, ಅಂತಹ ನಾಯಕರಿಗೆ ಜಿಟಿಡಿ ಅವರು ರಾಜಕೀಯದಿಂದ ದೂರವಾಗುತ್ತಿರುವುದು ಬೇಸರ ತಂದಿದೆ.
ಒಬ್ಬ ಮುಖ್ಯಮಂತ್ರಿ ವಿರುದ್ಧ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಪಡೆದಿರುವ ಜಿಟಿಡಿ ಅವರು ಒಕ್ಕಲಿಗರ ಪ್ರಭಾವಿ ನಾಯಕರಾಗಿದ್ದು, ಅವರು ರಾಜಕೀಯವಾಗಿ ನಿವೃತ್ತಿ ಹೊಂದುವುದಕ್ಕೆ ಯಾರು ಇಷ್ಟ ಪಡದಂತಾಗಿದ್ದು, ಇನ್ನೊಂದಷ್ಟು ವರ್ಷ ರಾಜಕೀಯದಲ್ಲಿ ಇರುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಆದರೆ ಜಿಟಿಡಿ ಈ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.