ಹಚ್.ಡಿ.ಕೋಟೆ: ತಾಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ದಟ್ಟಹಳ್ಳ ಗ್ರಾಮದ ಸಮೀಪದ ಹೆಬ್ಬಳ್ಳ ನೀರಿನಲ್ಲಿ ಕೊಳೆತ ರೀತಿಯಲ್ಲಿ ಹುಲಿಯ ಕಳೇಬರ ದೊರೆತಿದೆ.
ಎಂಟು ವರ್ಷ ಪ್ರಾಯದ ಗಂಡು ಹುಲಿಯ ಕಳೇಬರ ನೀರಿನಲ್ಲಿ ತೇಲುತ್ತಿರುವ ದೃಶ್ಯ ಆ ಭಾಗದ ಜನರಿಗೆ ಕಂಡು ಬಂದು ನಂತರ ಜನರು ಮೇಟಿಕುಪ್ಪೆ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ.
ಶನಿವಾರ ವನ್ಯಜೀವಿ ವಲಯದ ಮೇಲಾಧಿಕಾರಿಗಳ ನೇತೃತ್ವದಲ್ಲಿ ಅನುಮಾನಸ್ಪಾದವಾಗಿ ಸಾವಿಗೀಡಾಗಿರುವ ಹುಲಿಯ ಕಳೆಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಿದ ವೈದ್ಯರು, ಹುಲಿಯ ದೇಹದ ಆಯ್ದಭಾಗವನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಸಂಗ್ರಹಿಸಿ ನಂತರ ಅಲ್ಲೆ ಸುಟ್ಟು ಹಾಕಲಾಯಿತು.
ಕಾಡು ಪ್ರಾಣಿಗಳಾದ ಮೊಲ, ಹಂದಿ ಬೇಟೆಯಾಡುವ ಬೇಟೆಗಾರರು ಹಾಕಿದ್ದ ಉರುಳಿಗೆ ಹುಲಿಯು ಸಿಲುಕಿ ಸಾವನ್ನಪ್ಪಿರಬಹುದು ಎಂದು ಪ್ರಾಣಿ ಪ್ರಿಯರು ಅನುಮಾನ ವ್ಯಕ್ತಪಡಿಸುತ್ತಿದ್ದು, ಹುಲಿಯು ಸಾವನ್ನಪ್ಪಿ ನಾಲ್ಕೈದು ದಿನ ಕಳೆದಿದ್ದು ಹುಲಿಯ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೊರೆತ್ತಿರುವುದರಿಂದ ಸಾವಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ, ಹಾಗಾಗಿ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಹುಲಿಯ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ.
ಈ ಸಂದರ್ಭ ಡಿಸಿಎಫ್ ಮಹೇಶ್ಕುಮಾರ್, ಮೇಟಿಕುಪ್ಪೆ ವನ್ಯಜೀವಿ ವಲಯದ ಎಸಿಎಫ್ ಮಹದೇವ್, ಆರ್ಎಫ್ಒ ಹರ್ಷಿತ್, ಅಂತರಸಂತೆ ವನ್ಯಜೀವಿ ವಲಯದ ಆರ್ಎಫ್ಒ ಸಿದ್ದರಾಜು ಸೇರಿದಂತೆ ವಿಶೇಷ ಹುಲಿ ಸಂರಕ್ಷಣ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.