ಮೈಸೂರು: ಭಾರತದಲ್ಲಿ ಸುಮಾರು 7 ಮಿಲಿಯನ್ ವಿಶೇಷ ಮಕ್ಕಳಿದ್ದಾರೆ. ಇವರಿಗೆ ಮಾರ್ಗದರ್ಶನ ಮಾಡುವ ಪ್ರಾಮಾಣೀಕೃತ ಬೋಧಕರು ಕೇವಲ 250ರಿಂದ 300 ಮಂದಿ ಮಾತ್ರವಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಇರುವ ಈ ಕೊರತೆಯನ್ನು ನೀಗಿಸುವ ಕೆಲಸವಾಗಬೇಕು ಎಂದು ಜೆಎಸ್ಎಸ್ ಪಿಡಿಎ ಪ್ರಾಂಶುಪಾಲ ಬಿ.ಎಲಾಂಗೋವನ್ ತಿಳಿಸಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಮೂಲ ಭಾರತೀಯ ಸಂಜ್ಞಾ ಭಾಷೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಸಂವಹನ ಎಂಬುದು ಮುಖ್ಯವಾಗಿದ್ದು, ಭಾಷೆ, ಶಬ್ಧ, ಬರವಣಿಗೆ ಮೂಲಕ, ಸಂಜ್ಞಾ ಮೂಲಕ ಹೀಗೆ ಯಾವುದಾದರೂ ಒಂದು ವಿಧದಲ್ಲಿ ಪ್ರತಿಯೊಂದು ಜೀವಿಯೂ ಪರಸ್ಪರ ಸಂವಹನ ನಡೆಸಲೇಬೇಕು. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮಗಳ ಮೂಲಕ ಯಾವುದೇ ವಿಷಯವನ್ನು ಮೆದುಳು ತಲುಪುತ್ತದೆ. ಮೆದುಳು ನಿಯಂತ್ರಿಸುತ್ತದೆ. ಈ ಪಂಚೇಂದ್ರಿಯಗಳ ದೋಷವುಳ್ಳ ಅಂಧರಿಗೆ ಬ್ರೈಲ್ ಲಿಪಿಯ ಮೂಲಕ ಮತ್ತು ಕಿವುಡ ಮತ್ತ ಮೂಕ ಮಕ್ಕಳಿಗೆ ಸಂಜ್ಞಾ ಮೂಲಕ ವಿಷಯವನ್ನು ತಿಳಿಸಬೇಕಾಗುತ್ತದೆ ಎಂದರು.
ಕಿವುಡ ಮತ್ತು ಮೂಕ ಮಕ್ಕಳಿಗೆ ಯಾವುದೇ ವಿಷಯವನ್ನು ಅರ್ಥ ಮಾಡಿಸಲು ಬಾಡಿ ಲಾಂಗ್ವೇಜ್ ಮತ್ತು ಎಕ್ಸ್ ಪ್ರೆಷನ್ ಮುಖ್ಯವಾಗುತ್ತದೆ. ನಾನು 30 ವರ್ಷದಿಂದ ಈ ಕ್ಷೇತ್ರದಲ್ಲಿ ಬೋಧನೆ ಮಾಡುತ್ತಿದ್ದೇನೆ. ಈ ತರದ ಮಕ್ಕಳು ಕೂಡ ನಮಗೆ ಸಂಜ್ಞಾ ಭಾಷೆಯಲ್ಲಿ ಅಡ್ಡ ಹೆಸರುಗಳನ್ನು ಇಟ್ಟಿರುವುದು ನೋಡಿದ್ದೇನೆ. ಸಂಜ್ಞಾ ಭಾಷೆಯನ್ನು ಕಲಿಯಲು ಸುಲಭವಾಗಿದ್ದು, ಅನೇಕರು ಇದನ್ನು ಕಲಿತು ಮಾರ್ಗದರ್ಶಕರಾಗಲು ಸಲಹೆ ನೀಡಿದರು.
ಕಷ್ಟ ಎಂಬ ಕಾರಣಕ್ಕಾಗಿ ಈ ಮಕ್ಕಳಿಗೆ 10ನೇ ತರಗತಿಗೆ ಬರುವವರಿಗೆ ಗಣಿತ ಮತ್ತು ಇಂಗ್ಲಿಷ್ ಭಾಷೆಯನ್ನು ಹೇಳಿಕೊಡಲು ಮುಂದಾಗುವುದಿಲ್ಲ. ಹಾಗಾಗಿ, ಆ ನಂತರ 10ನೇ ತರಗತಿಗೆ ಬಂದಾಗ ಒಟ್ಟಿಗೆ ಕಲಿಸಲಾಗುತ್ತದೆ. ಇಂಗ್ಲಿಷ್ ಅತಿ ಮುಖ್ಯವಾದ ಜಾಗತಿಕ ಭಾಷೆಯಾಗಿದ್ದು, ಅದನ್ನು ಆರಂಭದಿಂದಲೇ ಇಂಗ್ಲಿಷ್ ಅನ್ನು ಕೂಡ ಸಂಜ್ಞಾ ಭಾಷೆಯಲ್ಲಿ ಕಲಿಸಲು ಮುಂದಾಗಬೇಕು. ಉತ್ತಮವಾಗಿ ಬೆಳಕು ಇರುವ ಕಡೆ ಬೋಧಿಸುವಂತೆ ಆಗಬೇಕು ಎಂದರು.
ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ ಗಾಯಿತ್ರಿ, ಸಂಕೇತ ಭಾಷೆಯೂ ವಿಶ್ವದಲ್ಲಿಯೇ ಶಕ್ತಿಯುತವಾಗಿದ್ದು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಾಗಿದೆ. ನಾವು ಕೂಡ ಚುನಾವಣಾ ಆಯೋಗದ ಅನುಮತಿ ಪಡೆದು ಸಂಜ್ಞಾ ಭಾಷೆಯಲ್ಲಿ ಚುನಾವಣಾ ಜಾಗೃತಿ ವಿಡಿಯೋ ಮೂಲಕ ಕಿವುಡ ಮತ್ತ ಮೂಕ ಮತದಾರರಲ್ಲಿ ಮತ ಜಾಗೃತಿ ಮೂಡಿಸಿದ್ದೆವು. ಗುಡ್ಡಗಾಡು ಪ್ರದೇಶದ ಜನರು ಹೆಚ್ಚು ಇಂತಹ ಭಾಷೆ ಬಳಸುತ್ತಾರೆ. ಪ್ರಾಣಿ ಮತ್ತು ಪಕ್ಷಿಗಳೂ ಈ ಭಾಷೆ ಬಳಸುತ್ತವೆ ಎಂದರು. ಆಯಿಷ್ ನಿರ್ದೇಶಕಿ ಪ್ರೊ.ಪುಷ್ಪವತಿ ಅಧ್ಯಕ್ಷತೆ ವಹಿಸಿದ್ದರು.