ಮೈಸೂರು: ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಶಾಸಕ ಬಿ. ಹರ್ಷವರ್ಧನ್ ನಾಮಪತ್ರ ಸಲ್ಲಿಸಿದರು.
ನಂಜನಗೂಡು ಪಟ್ಟಣದ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಂಜನಗೂಡು- ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ ಕಾಲ್ನಡಿಗೆಯಿಂದ ತಾಲೂಕು ಆಡಳಿತ ಭವನಕ್ಕೆ ಆಗಮಿಸಿ ಚುನಾವಣಾ ಅಧಿಕಾರಿ ಕೃಷ್ಣಮೂರ್ತಿಯವರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು.ಅಪಾರ ಜನಸ್ತೋಮದೊಂದಿಗೆ ತಾಲೂಕು ಆಡಳಿತ ಭವನದವರೆಗೆ ಕಾರ್ಯಕರ್ತರೊಂದಿಗೆ ಬೃಹತ್ ಕಾಲ್ನಡಿಗೆಯಲ್ಲಿ ಜಯ ಘೋಷ ಕೂಗಿ ಪಕ್ಷದ ಕಾರ್ಯಕರ್ತರು ಹರುಷ ವ್ಯಕ್ತಪಡಿಸಿದರು.
ಎರಡನೇ ಬಾರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮ ನಿರ್ದೇಶನ ಮಾಡಿ ಬಳಿಕ ಶಾಸಕ ಹರ್ಷವರ್ಧನ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು, ನಂಜನಗೂಡು ಕ್ಷೇತ್ರದಲ್ಲಿ 823 ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಸಂದರ್ಭದಲ್ಲಿ ಎಂದು ಕಂಡರಿಯದ ಅಭಿವೃದ್ಧಿ ಆಗಿದೆ. ತಾಲೂಕಿನಲ್ಲಿ ನಾನು ಮಾಡಿರುವ ಉತ್ತಮ ಕೆಲಸ ಕಾರ್ಯವೈಖರಿಯನ್ನು ಪರಿಗಣಿಸಿ ಮತ್ತೆ ನನ್ನನ್ನು ಮರು ಆಯ್ಕೆ ಮಾಡಲು ಮತದಾರರು ತೀರ್ಮಾನಿಸಿದ್ದಾರೆ. ಮತ್ತೊಮ್ಮೆ ಕಮಲ ಅರಳಿಸುತ್ತೇನೆ.
ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪ ಎಂದಿಗೂ ನಡೆಯುವುದಿಲ್ಲ. ಕ್ಷೇತ್ರದ ಮತದಾರರು ಅಭಿವೃದ್ಧಿಯನ್ನು ಮನಗಂಡು ಅನುಕಂಪದ ಕಡೆ ಯಾವುದೇ ಕಾರಣಕ್ಕೂ ಒಲವು ತೋರುವುದಿಲ್ಲ ಎಂಬ ನಂಬಿಕೆ ಇದೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಜೊತೆ ಒಪ್ಪಂದ ಮಾಡಿಕೊಂಡು ಅನುಕಂಪದ ಹೆಸರೇಳಿ ಕೈ ಜೊತೆ ಸೇರಿದ್ದಾರೆ. ಇದು ಒಂದು ಪ್ರಾದೇಶಿಕ ಪಕ್ಷಕ್ಕೆ ನಾಚಿಕೆಯ ಸಂಗತಿ ಎಂದು ಕಿಡಿಕಾರಿದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂಬ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಕುಂಬರಹಳ್ಳಿ ಸುಬ್ಬಣ್ಣ ಹೊರಳವಾಡಿ ಮಹೇಶ್, ಬಾಲಚಂದ್ರ, ಚಿಕ್ಕರಂಗನಾಯಕ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.