ಪಿರಿಯಾಪಟ್ಟಣ: ಬೇಸಿಗೆ ಆರಂಭದಲ್ಲಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು ಕೆಲವು ಗ್ರಾಮ ಪಂಚಾಯತಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ತಾಲೂಕಿನ ಚೌತಿ ಗ್ರಾಮ ಪಂಚಾಯತಿ ವತಿಯಿಂದ ಆಲದಕಟ್ಟೆ, ಬೂದಿತಿಟ್ಟು, ಕೆಎಸ್ ಕೆ ನಗರ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನಲ್ಲಿಗಳಲ್ಲಿ ನೀರು ಕೊಡುವುದು ಕಷ್ಟವಾಗುತ್ತಿರುವುದರಿಂದ ಚೌತಿ ಗ್ರಾಮ ಪಂಚಾಯಿತಿಯು ಕಸ ವಿಲೇವಾರಿ ವಾಹನಕ್ಕೆ ಸಾವಿರ ಲೀಟರ್ ಗಳ ಎರಡು ಸಿಂಟೆಕ್ ಟ್ಯಾಂಕ್ ಅಳವಡಿಸಿಕೊಂಡು ಪ್ರತಿದಿನ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ.
ಹಳ್ಳಿಗಳಲ್ಲಿ ಜನರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂಬ ಸರ್ಕಾರದ ಆದೇಶ ಮೇರೆಗೆ ನೀರಿನ ತೊಂದರೆ ಇರುವ ಗ್ರಾಮಗಳಿಗೆ ಟಾಸ್ಕ್ಫೋರ್ಸ್ ವತಿಯಿಂದ ಅಗತ್ಯ ಇರುವ ಗ್ರಾಮಗಳಿಗೆ ಬೋರ್ ವೆಲ್ ಕೊರೆಸುವುದು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಅಗತ್ಯ ಕ್ರಮಗಳನ್ನು ಈಗಾಗಲೇ ತಾಲೂಕು ಆಡಳಿತ ಕೈಗೊಂಡಿದ್ದರು ಜನ ಹಾಗೂ ಜಾನುವಾರುಗಳಿಗೆ ಸಾಕಾಗುವ ನೀರಿನ ಬವಣೆ ತಪ್ಪಿಸಲು ಅಧಿಕಾರಿಗಳು ಸಾಹಸ ಪಡುತ್ತಿದ್ದಾರೆ.
ಬೂದಿತಿಟ್ಟು ಹಾಗೂ ಆಲದಕಟ್ಟೆ ಬೋರ್ವೆಲ್ ನಲ್ಲಿ ನೀರು ಕಡಿಮೆಯಾಗಿದ್ದು ಈಗಾಗಲೇ ಬೋರ್ವೆಲ್ ಕೊರೆಸಲು ಸ್ಥಳ ಗುರುತಿಸಿದ್ದು ಆದಷ್ಟು ಬೇಗ ಬೋರ್ ವೆಲ್ ಕೊರಸಿ ನೀರನ್ನು ನಲ್ಲಿ ಮುಖಾಂತರ ಕೊಡಲಾಗುವುದು ಎಂದು ಚೌತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಗ್ರಾಮದ ಮೂರು ಬೋರ್ವೆಲ್ ನಲ್ಲಿ ಒಂದು ಹನಿಯು ನೀರಿಲ್ಲದೆ ಒಣಗಿದ್ದು, ಹೊಸ ಬೋರ್ವೆಲ್ ಕೊರೆಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಚೌತಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ರವಿಚಂದ್ರ ಬೂದಿತಿಟ್ಟು ತಿಳಿಸಿದ್ದಾರೆ.