ಮೈಸೂರು: ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದು, ಮಳೆಗಾಲವಾದರೂ ಸಾಕಷ್ಟು ಮಳೆಯಾಗದಿರುವ ಹಿನ್ನಲೆ ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಈಗ ಜಲಾಶಯಗಳಲ್ಲಿರುವ ನೀರು ನಗರಕ್ಕೆ ಮುಂದಿನ 20ರಿಂದ 25 ದಿನಕ್ಕೆ ಮಾತ್ರ ಸಾಕಾಗಲಿದೆ. ಬರ ಪರಿಸ್ಥಿತಿ ಎದುರಾದಲ್ಲಿ ಮೈಸೂರಿಗೆ ಜಲಕ್ಷಾಮ ಉಂಟಾಗಲಿದ್ದು, ಜನರು ಈಗಿನಿಂದಲೇ ನೀರಿನ ಮಿತಬಳಕೆ ಮಾಡಬೇಕು ಎಂದು ಮೇಯರ್ ಶಿವಕುಮಾರ್ ಮನವಿ ಮಾಡಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಮಾತನಾಡಿದ ಅವರು ನಗರಕ್ಕೆ ಪ್ರತಿನಿತ್ಯ 305 ಎಂಎಲ್ಡಿಯಷ್ಟು ಕುಡಿಯುವ ನೀರು ಸರಬರಾಜು ಆಗುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮಳೆ ಕೊರತೆಯಾದರೆ ಮುಂದೆ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಮಿತ ಬಳಕೆಗೆ ಮುಂದಾಗಬೇಕು ಎಂದರು.
ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಮೈಸೂರಿಗೆ ಮೇಳಾಪುರ, ಹೊಂಗಳ್ಳಿ, ಬೆಳಗೊಳ (ಕೆಆರ್ಎಸ್) ಹಾಗೂ ಕಬಿನಿಯಿಂದ ನೀರನ್ನು ಪಂಪ್ ಮಾಡಿ ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿದೆ. ಕಬಿನಿ ಜಲಾಶಯದಿಂದ ಡೆಡ್ ಸ್ಟೋರೇಜ್ವರೆಗೂ ನೀರನ್ನು ಮೇಲೆತ್ತಬಹುದಾಗಿದೆ. ಹೊಂಗಳ್ಳಿಯಿಂದ ನಿತ್ಯ 105ಎಂಎಲ್ಡಿಯಷ್ಟು ನೀರನ್ನು ಮೇಲೆತ್ತಲಾಗುತ್ತಿದೆ. ಸದ್ಯ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 78 ಅಡಿ ಇದೆ. ಅದು 68 ಅಡಿಗೆ ಇಳಿದರೆ ಹೊಂಗಳ್ಳಿ ಘಟಕದ 50ಎಂಎಲ್ಡಿ ಮೋಟಾರ್ ಸ್ಥಗಿತ ಆಗಲಿದ್ದು, ಇನ್ನೊಂದು ಮೋಟಾರ್ ಮಾತ್ರ ಚಾಲನೆಯಲ್ಲಿರಲಿದೆ. ಇದರಿಂದ 50 ಎಂಎಲ್ಡಿಯಷ್ಟು ನೀರಿನ ಕೊರತೆ ಎದುರಾಗಲಿದೆ ಎಂದು ವಿವರಿಸಿದರು. ಈ ಹಿನ್ನಲೆಯಲ್ಲಿ ನಿವಾಸಿಗಳು ನೀರನ್ನು ಆದಷ್ಟು ಕಡಿಮೆ ಅಗತ್ಯ ಕಾಯ್ಗಳಿಗೆ ಮಾತ್ರ ಬಳಸುವಂತೆ ಅವರು ಮನವಿ ಮಾಡಿದ್ದಾರೆ.