ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ನಾಲ್ಕು ಜಲಾಶಯಗಳ ಪೈಕಿ ಒಂದಾಗಿರುವ ತಾರಕ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಯಾವ ಕ್ಷಣದಲ್ಲಾದರೂ ಭರ್ತಿಯಾಗಲಿರುವುದರಿಂದ ನದಿಗೆ ನೀರು ಬಿಡುವುದು ಅನಿವಾರ್ಯವಾಗುವುದರಿಂದ ತಗ್ಗು ಪ್ರದೇಶದಲ್ಲಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿರುವ ನಾಲ್ಕು ಜಲಾಶಯಗಳಾದ ಕಬಿನಿ, ನುಗು, ಹೆಬ್ಬಾಳ ಜಲಾಶಯಗಳು ಬಹುಬೇಗ ಭರ್ತಿಯಾದರೂ ತಾರಕ ಜಲಾಶಯ ಭರ್ತಿಯಾಗುವುದು ತುಸು ಕಷ್ಟವೇ ಏಕೆಂದರೆ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿ ನೀರು ಹರಿದು ಬಂದರೆ ಮಾತ್ರ ಭರ್ತಿಯಾಗುತ್ತದೆ. ಹೀಗಾಗಿ ಇದು ಪ್ರತಿವರ್ಷವೂ ಮಳೆಗಾಲದಲ್ಲಿ ಭರ್ತಿಯಾಗುವುದು ಕಷ್ಟವಾಗಿದೆ.
ತಾರಕ ಜಲಾಶಯ ಭರ್ತಿಯಾಗಬೇಕಾದರೆ ಹೆಚ್.ಡಿ.ಕೋಟೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸುರಿಯುವ ಮಳೆಯಿಂದ ಸಾರತಿ ನದಿ ತುಂಬಿ ಹರಿಯಲೇ ಬೇಕಾಗುತ್ತದೆ. ನುಗು ಮತ್ತು ತಾರಕ ಜಲಾಶಯಗಳು ಕಳೆದ ಮೂರು ವರ್ಷಗಳಿಂದ ಭರ್ತಿಯಾಗುತ್ತಲೇ ಇವೆ. ಆದರೆ ಈ ಹಿಂದೆ ನುಗು ಜಲಾಶಯ 2009 ಮತ್ತು 2013ರಲ್ಲಿ ಭರ್ತಿಯಾಗಿತ್ತು. ಆದಾದ ಬಳಿಕ 2018ರ ನಂತರ ಪ್ರತಿವರ್ಷವೂ ಭರ್ತಿಯಾಗುತ್ತಿದೆ. ಈ ಜಲಾಶಯದ ಬಗ್ಗೆ ಹೇಳುವುದಾದರೆ 110 ಅಡಿ ಸಾಮರ್ಥ್ಯದ ಈ ಜಲಾಶಯವನ್ನು 1956ರಲ್ಲಿ ನಿರ್ಮಿಸಲು ಆರಂಭಿಸಿ 1959ರಲ್ಲಿ ಪೂರ್ಣಗೊಳಿಸಲಾಗಿದೆ.
ತಾರಕ ಜಲಾಶಯವು 2013ರ ಬಳಿಕ 2018ರಲ್ಲಿ ಭರ್ತಿಯಾಗಿತ್ತಾದರೂ ಆ ನಂತರ ಭರ್ತಿಯಾಗುತ್ತಲೇ ಇದೆ. 1998ರಲ್ಲಿ ಕೃಷಿ ಉದ್ದೇಶದಿಂದ ನಿರ್ಮಾಣವಾದ ತಾರಕ ಜಲಾಶಯ ರೈತರ ಕೃಷಿ ಭೂಮಿಗೆ ನೀರೊದಗಿಸುತ್ತಿದೆ. 2425 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ 2013ರಲ್ಲಿ ದಾಖಲೆಯ ಪ್ರಮಾಣದ ನೀರು ಸಂಗ್ರಹವಾಗಿದ್ದನ್ನು ಬಿಟ್ಟರೆ 2018ರಲ್ಲಿ ನೀರು ಸಂಗ್ರಹವಾಗಿತ್ತು. 3.80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಕ್ರಸ್ಟ್ ಗೇಟ್ 2006ರಲ್ಲಿ ಒಡೆದು ಜಲಾಶಯದ ನೀರು ಮನೆ, ಜಮೀನಿಗೆ ನುಗ್ಗಿ ಹಾನಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಬಾರಿ ಮಳೆಯ ಕಾರಣ ಬಹುಬೇಗ ಭರ್ತಿಯಾಗುತ್ತಿದೆ. ಹೀಗಾಗಿ ಕಾವೇರಿ ನೀರಾವರಿ ನಿಗಮ ನಿಯಮಿತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಸಿ.ರಾಮೇಗೌಡ ಅವರು ತಾರಕ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ, ತಾರಕ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಹಂತದಲ್ಲಿ ಇರುವುದರಿಂದ, ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ನೀರನ್ನು ಹೊರ ಬಿಡಲಾಗುವುದು.
ತಾರಕ ನದಿಯ ದಂಡೆಯಲ್ಲಿ ವಾಸಿಸುತ್ತಿರುವವರು, ಸಾರ್ವಜನಿಕರು ಹಾಗೂ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಇರುವವವವರು ತಮ್ಮ ಆಸ್ತಿ ಪಾಸ್ತಿ, ಜನ ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ಒಟ್ಟಾರೆ 2018ರ ನಂತರ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಎಲ್ಲ ಜಲಾಶಯಗಳು ಮತ್ತು ಕೆರೆ ಕಟ್ಟೆಗಳು ಭರ್ತಿಯಾಗುತ್ತಿರುವುದು ರೈತರಲ್ಲಿ ಖುಷಿ ತಂದಿದೆ.