ಮೈಸೂರು: ಲಿಂಗಾಯತ ಸಿಎಂ ಕುರಿತಂತೆ ಸಿದ್ದರಾಮಯ್ಯ ಅವರ ಆ ಹೇಳಿಕೆ ಬಸವ ತತ್ವಕ್ಕೆ ಮಾಡಿದ ಅಪಚಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಏನೇ ಸ್ಪಷ್ಟನೆ ನೀಡಿದರೂ ಅವರು ನೀಡಿದ ಹೇಳಿಕೆಯ ಒಂದೊಂದು ಅಕ್ಷರವೂ ಪ್ರಸಾರವಾಗಿದೆ. ಬೇಕಿದ್ದರೆ ಮತ್ತೆ ಪ್ರಸಾರ ಮಾಡಿ ನೋಡಿ ಸತ್ಯ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಚಕ್ರವ್ಯೂಹದಲ್ಲಿ ಸಿಲುಕಿದಂತಾಗಿದೆ. ಅವರನ್ನು ಕಾಪಾಡಲು ಕೃಷ್ಣ ಕೂಡ ಅವರ ಜತೆಗಿಲ್ಲ, ನಮ್ಮ ಜೊತೆಗಿದ್ದಾರೆ.
ಇನ್ನೂ ಡಿ.ಕೆ. ಶಿವಕುಮಾರ್ ನೆರವೂ ಇಲ್ಲ. ಅವರು ಇರುವ ಎಲ್ಲಾ ಅಸ್ತ್ರವನ್ನು ಇವರ ಮೇಲೆಯೇ ಪ್ರಯೋಗಿಸುತ್ತಾರೆ. ಇನ್ನು ಖರ್ಗೆ ಬೆಂಬಲ ಇಲ್ಲ, ಪರಮೇಶ್ವರ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಕುಟುಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಲಿಂಗಾಯತ ಡ್ಯಾಂ ಒಡೆದಿದ್ದೇವೆ ಎಂದು ಹೇಳಿದ್ದಾರೆ. ಸಮಾಜ ಒಡೆಯುವುದು ಅವರ ರಾಜಕೀಯದ ಒಂದು ಭಾಗ. ಆದರೆ ನಾವು ಬಸವಣ್ಣ, ಕನಕದಾಸರು, ಕೆಂಪೇಗೌಡರು, ಸಂಗೊಳ್ಳಿ ರಾಯಣ್ಣ ಮುಂತಾದವರ ಮೂಲಕ ಡ್ಯಾಂನ ಎತ್ತರ ಹೆಚ್ಚಿಸಿ ಭದ್ರಗೊಳಿಸಿದ್ದೇವೆ. ಅದು ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಅವೆಲ್ಲವನೂ ಹಿಂದುತ್ವದ ಮೂಲಕ ಗಟ್ಟಿಗೊಳಿಸಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಒಂದು ಬುದ್ಧಿ ಇದೆ. ತನಗಲ್ಲದ್ದು ಬೇರೆಯವರಿಗೂ ಧಕ್ಕಬಾರದು ಎಂಬ ನೀತಿ. ಈ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಲಿಂಗಾಯಿತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ರೀತಿಯಿಂದ ನೋಡಿದರೆ ವರುಣ ಕ್ಷೇತ್ರದಲ್ಲಿ ಲಿಂಗಾಯಿತರು ಒಗ್ಗಟ್ಟಾಗಿದ್ದಾರೆ ಎಂಬ ಆಕ್ರೋಶ ಇರಬಹುದು, ಇಲ್ಲವೇ ಎರಡು ಕ್ಷೇತ್ರಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಸಿಟ್ಟೂ ಇರಬಹುದು ಎಂದರು.
ಸಿದ್ದರಾಮಯ್ಯ ಅವರು ಬಾಯಿ ತಪ್ಪಿ ಹೇಳಿಕೆ ನೀಡಲು ಚಿಕ್ಕಮಗುವಲ್ಲ. ಯಾವಾಗ ಯಾವ ಹಕ್ಕಿಗೆ ಕಲ್ಲು ಹೊಡೆಯಬೇಕು ಎಂಬುದನ್ನು ಬಲ್ಲವರು. 40 ವರ್ಷಕ್ಕೂ ಹಚ್ಚಿನ ಕಾಲ ರಾಜಕೀಯದಲ್ಲಿ ಒಡನಾಡಿದ್ದಾರೆ ಎಂದು ಹೇಳಿದರು.
ಹಂತ ಹಂತವಾಗಿ ಮುಸ್ಲಿಮರು ಬಿಜೆಪಿಗೆ ಬರುತ್ತಿದ್ದಾರೆ. ನಾವು ಇದುವರೆಗೂ ಅಲ್ಪಸಂಖ್ಯಾತರನ್ನು ಹೊರಗಿಟ್ಟು ಕಾರ್ಯಕ್ರಮ ರೂಪಿಸಿಲ್ಲ. ನರೇಂದ್ರಮೋದಿ ಅವರ ಯೋಜನೆ ಬೇಕು, ಪಕ್ಷ ಬೇಡ ಎಂದರೆ ಹೇಗೆ? ಈವರೆಗೆ ಸುಮ್ಮನೆ ನಿಮ್ಮ (ಅಲ್ಪಸಂಖ್ಯಾತರು) ಮತವನ್ನು ಕಾಂಗ್ರೆಸ್ನಲ್ಲಿ ಡಿಪಾಸಿಟ್ ಇಡುತ್ತಿದ್ದಿರಿ. ಈಗ ಬಿಜೆಪಿಯಲ್ಲಿ ಡಿಪಾಸಿಟ್ ಇಟ್ಟು, ಚೆಕ್ ಕೊಡಿ ಡ್ರಾ ಆಗುತ್ತದೆ ಎಂದು ಸೂಚ್ಯವಾಗಿ ನುಡಿದರು.