ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ವೈಭವಯುತ ತೆರೆ ಬಿದ್ದಿದೆ.
ಫೆ.1ರಿಂದ ಆರಂಭವಾದ ವಿವಿಧ ಹೋಮಗಳು, ಎಲ್ಲಾ ದೇವತಾ ಪೂಜಾ ಕಾರ್ಯಗಳು ಅದ್ದೂರಿಯಾಗಿ ನೆರವೇರಿದವು. ಭಾನುವಾರ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದ ಕೊನೆಯ ದಿನ. ಜತೆಗೆ ಮಾಘ ಪೂರ್ಣಿಮೆ. ಹಾಗಾಗಿ ವಿವಿಧ ಪೂಜಾಕಾರ್ಯಗಳು ನೆರವೇರಿದವು. ಪವಮಾನ ಹೋಮ ಮತ್ತು ದತ್ತ ಹೋಮಗಳನ್ನು ಮಾಡಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿ ಸಮರ್ಪಣೆ ಮಾಡಿದರು. ಜಪಾನಿ ಭಕ್ತರು ಅವರ ಭಾಷೆಯಲ್ಲಿ ಶ್ರೀಗಳ ಸಾಧನೆಗಳನ್ನು ತಿಳಿಸಿ ಭಕ್ತಿ ಕೊಂಡಾಡಿದರು.
ಬಲ್ಲಾದಿ ಶ್ರೀರಾಮ ಪ್ರಸಾದ್ ಸಹೋದರರು ಸಹಸ್ರ ಚಂದ್ರ ಗೀತೆ, ಸ್ವಾಗತಂ ಶುಭ ಸ್ವಾಗತಂ… ಸ್ವಾಗತಂ ಶುಭ ಮಾಗತಂ ಎಂಬ ಗೀತೆಗಳನ್ನು ಹಾಡಿ ಭಕ್ತರು ತಲೆದೂಗುವಂತೆ ಮಾಡಿದರು. ನಂತರ ಶ್ರೀಗಳ ವಿರಚಿತ ವಕ್ಕಟೈ ಎಂಬ ಗೀತೆಯನ್ನು ಸುಂದರ್ ಅವರು ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಮಲೇಷಿಯಾದ ಜ್ಞಾನ ಬೋಧ ಸಭಾದ ಸುಂದರಿ, ಜ್ಞಾನಸುಂದರಿ ಮತ್ತು ಸದಸ್ಯರು ಶ್ರೀಗಳ ಸಹಸ್ರ ಚಂದ್ರ ದರ್ಶನ ಶಾಂತಿ ಪ್ರಯುಕ್ತ ವಿಶೇಷ ಕೇಕ್ ಸಿದ್ದಪಡಿಸಿ ಸ್ವಾಮೀಜಿಯವರಿಂದ ಕಟ್ ಮಾಡಿಸಿದ್ದು ವಿಶೇಷವಾಗಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್ ದತ್ತ ಯೋಗ ಸೆಂಟರ್ನವರು ಶ್ರೀಗಳ ಚಿತ್ರವುಳ್ಳ ಕ್ರಿಸ್ಟಲ್ ಪ್ಲೇಟ್ ಕೊಡುಗೆ ನೀಡಿದರು. ಟ್ರಿನಿಡಾಡ್ ದತ್ತ ಯೋಗ ಸೆಂಟರ್, ವಿಜಯವಾಡ ಆಶ್ರಮ, ಶ್ರೀ ಪಂಚಮುಖಿ ದೇವಸ್ತನಂ ಸೇರಿದಂತೆ ನೂರಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಸಮರ್ಪಣೆ ಮಾಡಿದರು.
ಇದೇ ವೇಳೆ ಪೂರ್ಣಕಲಾ ತಂಡದವರು ಸಹಸ್ರ ಚಂದ್ರ ದರ್ಶನಕ್ಕಾಗಿಯೇ ಸಿದ್ದಪಡಿಸಿ ತಂದಿದ್ದ ವಿಶೇಷ ಉಡುಗೊರೆಯನ್ನು ಶ್ರೀಗಳಿಗೆ ನೀಡಿದರು. ಭಕ್ತಿ ಸಮರ್ಪಣೆ ನಂತರ ಸ್ವಾಮೀಜಿಯವರ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಆ ನಂತರ ಶ್ರೀಗಳು ಗುರು ನಿಲಯ ಪ್ರವೇಶ ಮಾಡಿದರು. ಶ್ರೀಗಳ ತುಲಾಭಾರದ ನಂತರ ಸಂಜೆ ಸಪ್ತರ್ಷಿ ಸರೋವರದಲ್ಲಿ ವೈಭವಯುತ ತೆಪ್ಪೋತ್ಸವ ನಡೆಯಿತು.
ಆಶ್ರಮದ ಆವರಣದಲ್ಲಿ ಸ್ವಾಮೀಜಿಗಳ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವ ಪ್ರಯುಕ್ತ ಬೆಂಗಳೂರಿನಿಂದ ಆಗಮಿಸಿದ್ದ ವೈದ್ಯರ ತಂಡ ಆಶ್ರಮದ ಆಸ್ಪತ್ರೆಯಲ್ಲಿ ಉಚಿತ ಶ್ರವಣ ತಪಾಸಣೆ ಮಾಡಿ ಅರ್ಹರಿಗೆ ಶ್ರವಣದೋಷ ಯಂತ್ರಗಳನ್ನು ವಿತರಿಸಿದರು.