ಮೈಸೂರು: ಕಳೆದ ಐದು ತಿಂಗಳ ಹಿಂದೆ ನಡೆದಿದ್ದ ಶಿಕ್ಷಕಿಯ ಕೊಲೆ ಪ್ರಕರಣ ಬೇಧಿಸುವಲ್ಲಿ ನಂಜನಗೂಡು ಪಟ್ಟಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಕೊಲೆಗೆ ಸುಫಾರಿ ನೀಡಿದ ನಗರಸಭೆ ಸದಸ್ಯೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಎಸ್ಪಿ ಆರ್. ಚೇತನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಂಜನಗೂಡು ಪಟ್ಟಣದ ಸಭಾಪತಿ ಬಡಾವಣೆಯಲ್ಲಿ ವಾಸವಿದ್ದ ವಸತಿ ಶಾಲೆಯೊಂದರ ಹಿಂದಿ ಶಿಕ್ಷಕಿ ಸುಲೋಚನಾ ಅವರನ್ನು ಕಳೆದ ಮಾ.8ರ ರಾತ್ರಿ ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಕೊಲೆ ರಹಸ್ಯ ಬೇಧಿಸಿ, 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಂಜನಗೂಡು ನಗರಸಭೆಯ ಸದಸ್ಯೆ ಗಾಯಿತ್ರಿ ಮುರುಗೇಶ್, ಅವರ ಸಂಬಂಧಿಕರಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತ ಆರೋಪಿಗಳು. ಮೃತ ಶಿಕ್ಷಕಿಯೊಂದಿಗೆ ಪತಿ ಮುರುಗೇಶ್ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ನಗರಸಭೆ ಸದಸ್ಯೆ ತನ್ನ ಸಂಬಂಧಿಕರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಭಾಪತಿ ಬಡಾವಣೆಯ ಬಾಡಿಗೆ ಮನೆಯಲ್ಲಿ ಸುಲೋಚನಾ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಗುತ್ತಿಗೆ ಆಧಾರದಲ್ಲಿ ವಸತಿ ಶಾಲೆಯೊಂದಲ್ಲಿ ಹಿಂದಿ ಶಿಕ್ಷಕಿಯಾಗಿದ್ದರು. ಇವರ ಪತಿ ನಿಧನರಾಗಿದ್ದು, ಇರುವ ಇಬ್ಬರು ಮಕ್ಕಳಲ್ಲಿ ಮಗಳ ಮದುವೆಯಾಗಿದ್ದು, ಮಗ ಊರಿನಲ್ಲಿ ಇರಲಿಲ್ಲ. ಮಾ.8ರಂದು ಒಬ್ಬರೇ ಮನೆಯಲ್ಲಿ ಇರುವಾಗ ರಾತ್ರಿ ವೇಳೆ ಕೊಲೆ ಮಾಡಲಾಗಿತ್ತು. ಈ ಸಂಬಂಧ ಶಿಕ್ಷಕಿ ಪುತ್ರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೊಲೆಯಾದ ಶಿಕ್ಷಕಿ ಮತ್ತು ಆರೋಪಿತ ಮಹಿಳೆಯೊಬ್ಬರ ಪತಿಗೂ ಸ್ನೇಹವಿತ್ತು ಎಂಬ ಕಾರಣದಿಂದ ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಇನ್ನು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದರು. ನಂಜನಗೂಡು ಪಟ್ಟಣ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ಕೆ.ತಳವಾರ್ ನೇತೃತ್ವದಲ್ಲಿ ನಂಜನಗೂಡು ಪಟ್ಟಣ ಠಾಣೆಯ ಎಸ್ಐಗಳಾದ ವಿಜಯರಾಜ್, ಬಿ. ಮಹೇಂದ್ರ, ಟಿ. ಆರತಿ ಮತ್ತು ಸಿಬ್ಬಂದಿ ಸತೀಶ್, ಅಶೋಕ್, ಲೋಕೇಶ, ಶಿವಕುಮಾರ್, ರವಿಕುಮಾರ್, ನಾಗೇಂದ್ರ, ರಾಜು, ಶ್ರೀದೇವಿ ಗಾಣಿಗೇರ್ ಈ ಪತ್ತೆ ಮಾಡಿದ್ದಾರೆ. ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಗೋವಿಂದರಾಜ್ ಇದ್ದರು.