ಪಿರಿಯಾಪಟ್ಟಣ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಹಸೀಲ್ದಾರ್ ಕುಂಞಿ ಅಹಮದ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಎಪಿಎಂಸಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತಪರ ಸಂಘಟನೆ ಪದಾಧಿಕಾರಿಗಳು ಖರೀದಿದಾರರು ಹಾಗೂ ರೈತರ ಸಭೆ ನಡೆಸಿ ಅವರು ಮಾತನಾಡಿದರು, ರೈತರ ಅಭಿವೃದ್ಧಿಗಾಗಿ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಆರಂಭಿಸಿದ್ದು ಇದರಿಂದ ರೈತರಿಗೆ ಅನುಕೂಲವಾಗಬೇಕೆ ಹೊರತು ಸಮಸ್ಯೆ ಆಗಬಾರದು ಖರೀದಿ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಹಲವು ದೂರುಗಳು ಕೇಳಿ ಬರುತ್ತಿದ್ದು ಮುಂದೆಯೂ ಇದೆ ಪುನರಾವರ್ತನೆ ಆದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಕೇಂದ್ರಕ್ಕೆ ಬರುವ ರೈತರಿಗೆ ಸಮರ್ಪಕ ಮೂಲಭೂತ ವ್ಯವಸ್ಥೆ ಕಲ್ಪಿಸುವ ಮೂಲಕ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ರೈತ ಸಂಘ ಮುಖಂಡರು ಮಾತನಾಡಿ ಖರೀದಿ ಕೇಂದ್ರದಲ್ಲಿ ದಲ್ಲಾಳಿ ಹಾವಳಿ ತಪ್ಪಿಸಬೇಕು, ಮೂಲಭೂತ ಸೌಕರ್ಯ ಸಮರ್ಪಕವಾಗಿ ಒದಗಿಸಬೇಕು, ಟೋಕನ್ ಕೊಟ್ಟ ರಾಗಿಯನ್ನು ಅದೇ ದಿನ ಪೂರ್ತಿ ಖಾಲಿ ಮಾಡಬೇಕು, ಮುಂದಿನ ಬಾರಿ ರಾವಂದೂರು ಹಾಗೂ ಹಾರನಹಳ್ಳಿ ಹೋಬಳಿ ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯುವಂತೆ ಸರ್ಕಾರ ಗಮನಹರಿಸಬೇಕು ಎಂದು ಮನವಿ ಪತ್ರ ನೀಡಿದರು.
ಈ ಸಂದರ್ಭ ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ನಿರೀಕ್ಷಕ ಎಂ.ಆರ್ ಮಂಜುನಾಥ್, ತೋಟಗಾರಿಕೆ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ಖರೀದಿ ಕೇಂದ್ರದ ಅಧಿಕಾರಿಗಳಾದ ಅಕ್ಷಯ್, ಸೋಮಯ್ಯ, ರೈತ ಸಂಘ ತಾಲೂಕು ಅಧ್ಯಕ್ಷ ಕೆ.ಎಸ್ ಸೋಮೇಗೌಡ, ಕಾರ್ಯದರ್ಶಿ ಗಡಿಗೌಡ, ಕಾರ್ಯಾಧ್ಯಕ್ಷ ಬಿ.ಜೆ ದೇವರಾಜು, ಉಪಾಧ್ಯಕ್ಷ ಗುರುರಾಜ್, ಖಜಾಂಚಿ ಗಣೇಶ್, ಮುಖಂಡರಾದ ಪ್ರಕಾಶ್ ರಾಜೇ ಅರಸ್ದಶರಥ, ಹರೀಶ್ ರಾಜೇಅರಸ್, ನವೀನ್ ರಾಜೇಅರಸ್, ಮಹೇಶ್, ಮಹದೇವ್, ಸುರೇಶ್ ಮತ್ತಿತರಿದ್ದರು.