ಹಿರೀಕ್ಯಾತನಹಳ್ಳಿ: ಹುಣಸೂರು ತಾಲೂಕಿನ ಗಾವಡಗೆರೆ ಶ್ರೀ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಹಾಗೂ ಐನೂರಕ್ಕೂ ಹೆಚ್ಚು ಭಕ್ತರು ಜೊತೆಗೂಡಿ ಮಲೆ ಮಾದೇಶ್ವರ ಬೆಟ್ಟಕ್ಕೆ ೭ನೇ ವೇದ ಪಾದಯಾತ್ರೆಯನ್ನು ಭಕ್ತರೊಂದಿಗೆ ಆರಂಭಿಸಿದರು.
ಬುಧವಾರ ಬೆಳಗ್ಗೆ ಮಠದಿಂದ ಹೊರಟು ಕೆ.ಆರ್.ನಗರದ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲಾಳ ದೇವನಹಳ್ಳಿಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ ಡಿ. 29ರಂದು ಗುರುವಾರ ಮೈಸೂರಿನ ಸಿದ್ದಾರ್ಥ ಲೇಔಟ್ ನ ಕನಕ ಸಮುದಾಯ ಭವನದಲ್ಲಿ ವಾಸ್ತವ್ಯ 30ರ ಶುಕ್ರವಾರ ಟಿ.ನರಸೀಪುರದ ಮಂಗಳ ಮಂಟಪದಲ್ಲಿ ವಾಸ್ತವ್ಯ 31ರ ಶನಿವಾರ ಕೊಳ್ಳೇಗಾಲದ ಮಹಿಳಾ ಕಾಲೇಜಿನಲ್ಲಿ ವಾಸ್ತವ್ಯ ಜನವರಿ 1ರಂದು ಹನೂರುನಲ್ಲಿ ವಾಸ್ತವ್ಯ 2 ರಂದು ರಾತ್ರಿ ಶ್ರೀಮಲೆ ಮಹದೇಶ್ವರ ತಾಳಬೆಟ್ಟದಲ್ಲಿ ವಾಸ್ತವ್ಯ ಮಾಡಿ ಜನವರಿ 3ರಂದು ಬೆಟ್ಟ ತಲುಪಿ ದೇವಸ್ಥಾನದಲ್ಲಿ ಸಂಜೆ ಬೆಳ್ಳಿ ಹಾಗೂ ಚಿನ್ನದ ತೇರನ್ನು ಭಕ್ತರೊಂದಿಗೆ ಎಳೆಯಲಿದ್ದಾರೆ.
ಈ ಕುರಿತಂತೆ ಮಾತನಾಡಿದ ಶ್ರೀಗಳು ನಾವು ಹೋಗುವ ಪಾದಯಾತ್ರೆಯ ಉದ್ದಕ್ಕೂ ಭಕ್ತರು ಅಲ್ಲಲ್ಲಿ ಸೇರಿಕೊಂಡು ಪಾದಯಾತ್ರೆ ಭಾಗವಹಿಸುವುದರ ಜೊತೆಗೆ ಭಕ್ತರ ಹಾಗೂ ನಮ್ಮ ಪಾದಯಾತ್ರೆಯ ಉದ್ದೇಶ ಕೃಷಿಕ ಸಮಾಜದ ಸಮುದಾಯದವರಿಗೆ ಅನುಗ್ರಹ ಆಶೀರ್ವಾದ ಸಿಗಲಿ ಎಂಬುದಾಗಿದೆ. ಸಂಪತ್ತನ್ನು ಕೊಡಬಹುದು ಅಥವಾ ತೆಗೆದುಕೊಳ್ಳಬಹುದು ಆದರೆ ಸಮಾಧಾನ ತೃಪ್ತಿಯ ಕರುಣೆ ಸಲ್ಲದು, ಪಾದಯಾತ್ರೆಯಿಂದ ನಡೆದುಕೊಳ್ಳುವ ನಮ್ಮ ಭಾವನೆಗಳು ಅರ್ಥವಾಗುತ್ತವೆ. 400 ವರ್ಷ ಗಳ ಹಿಂದೆ ಗಿರಿ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಂತಹ ಕಾಲದಲ್ಲಿ ಪುಣ್ಯ ಪುರುಷರು ಏರುಮಲೆಯಲ್ಲಿ ಸಂಚರಿಸಿ ಕಾಲ್ನಡಿಗೆಯಲ್ಲಿ ದೇವರ ದರ್ಶನ ಮಾಡುತ್ತಿದ್ದರು. ನಡಿಗೆ ಮನಸ್ಸಿಗೆ ಸತ್ಯತೆಯನ್ನು ತಿಳಿಸುತ್ತದೆ. ನಾಗರಿಕ ಸಮಾಜ ಕಟ್ಟುವ ದಿನಮಾನ ಪ್ರೀತಿ ಸ್ನೇಹ ಸೌಹಾರ್ದ ಆಲೋಚನೆ ಮಾಡುವ ಮಹಾಕಾರ್ಯ ಇಂತಹ ಒತ್ತಡದ ನಡುವೆ ಸಹ ವಾಹನಗಳಲ್ಲಿ ಕರೆದುಕೊಂಡು ಹೋಗುವ ಕಾಲದಲ್ಲಿ ಕಾಲ್ನಡಿಗೆ ಮಾಡುವುದರಿಂದ ಸಂಭ್ರಮ ಸಂತೋಷ ಸಮಾಧಾನ ಸಂತೃಪ್ತಿ ಹಾಗೂ ದೇಹ ಸದೃಢವಾಗುತ್ತದೆ ಎಂಬ ಭಾವನೆ ಜೊತೆಗೆ ಜಗತ್ತಿಗೆ ಒಳಿತು ಮಾಡುವ ಸಕಲ ಜೀವಗಳಿಗೂ ಒಳ್ಳೆಯದಾಗಲಿ ಎನ್ನುವ ಉದ್ದೇಶವು ಇದೆ ಎಂದರು.
ಈ ಸಂದರ್ಭದಲ್ಲಿ ತುಮಕೂರಿನ ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಹುಣಸೂರು ನಗರಸಭಾ ಸದಸ್ಯ ಕುಮಾರಸ್ವಾಮಿ ಮಠದ ಭಕ್ತರಾದ ಪುಟ್ಟ ಲಿಂಗಪ್ಪ, ಡಾ. ವೃಷಬೇಂದ್ರ, ಶಿಲ್ಪ ಮಂಜುನಾಥ್, ಭರತ್, ಮಂಜುನಾಥ್, ಮಲ್ಲೇಶ್, ಚಂದ್ರಪ್ಪ, ಲಿಂಗರಾಜಪ್ಪ, ಮಠದ ಆಡಳಿತ ಅಧಿಕಾರಿ ಶಿವರಾಜ್ ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.