ಮೈಸೂರು: ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಸಿರಿಧಾನ್ಯ ಮೇಳ ನಡೆಯಿತು.
ಮೇಳವನ್ನು ಸಿರಿಧಾನ್ಯ ವಿಭಾಗದ ಮೇಲ್ವಿಚಾರಕರಾದ ಶಶಿಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ಸಿರಿಧಾನ್ಯಗಳನ್ನು ಆಹಾರ ಮಾಡಿಕೊಂಡು ಸೇವಿಸುತ್ತಾ ಬಂದಿದ್ದರಿಂದ ನೂರಾರು ಕಾಲ ಆರೋಗ್ಯದೊಂದಿಗೆ ಬಾಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರೋಟೀನ್ ಇಲ್ಲದ ಆಹಾರ ಪದಾರ್ಥಗಳನ್ನು ಬಳಸಿ ಅನಾರೋಗ್ಯಕ್ಕೆ ತುತ್ತಾಗಿ ರೋಗಗಳು ಹೆಚ್ಚಾಗುವುದರ ಜೊತೆಗೆ ನಮ್ಮ ಆಯುಸ್ಸು ಕಡಿಮೆಯಾಗುತ್ತಿದೆ ಎಂದರು.
ಸಿರಿಧಾನ್ಯಗಳ ಬಳಕೆಯಿಂದ ಸಕ್ಕರೆ ಕಾಯಿಲೆ ರಕ್ತದೊತ್ತಡ ದೇಹದಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ ಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಆರೋಗ್ಯವೃದ್ಧಿ, ಮೂಳೆ ಸವೆತವನ್ನು ತಡೆಯುತ್ತದೆ ಕೊಬ್ಬು ಅಂಶವನ್ನು ಕಡಿಮೆ ಮಾಡಿ ಸೌಂದರ್ಯವರ್ಧಕಕ್ಕೂ ಅನುಕೂಲವಾಗುವುದರ ಜೊತೆಗೆ ಸಿರಿಧಾನ್ಯಗಳನ್ನು ಸೇವನೆಯಿಂದ ನಾರಿನ ಅಂಶ ಹೆಚ್ಚಾಗುತ್ತದೆ ಆಹಾರ ಸೇವನೆಯ ನಂತರ ಹೆಚ್ಚು ನೀರು ಕುಡಿಯುವುದರಿಂದ ಸೇವಿಸಿದ ಆಹಾರ ವಿಷವಾಗುವುದನ್ನು ತಡೆಯುತ್ತದೆ. ಜೊತೆಗೆ ಮಹಿಳೆಯರು ಹೆಚ್ಚು ಮೈದಾಹಿಟ್ಟು ಬಳಕೆಯಿಂದ ಗರ್ಭಿಣಿ ಮಹಿಳೆಯರಲ್ಲಿ ಥೈರಾಡ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದರಲ್ಲದೆ, ಸಿರಿಧಾನ್ಯಗಳ ಆಹಾರಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಲವಾರು ಸಿರಿಧಾನ್ಯಗಳನ್ನು ಪ್ರದರ್ಶನ ಮಾಡುವುದರ ಜೊತೆಗೆ ಅದರಿಂದ ಹಲವು ಪದಾರ್ಥಗಳನ್ನು ತಯಾರಿಸಿ ವಿವಿಧ ಖಾದ್ಯಗಳನ್ನು ಮಾಡಿ ಅಲ್ಲಿ ಸೇರಿದ್ದ ಜನರಿಗೆ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಶಿವರಾಜ್ ಹರವೆ, ಮೇಲ್ವಿಚಾರಕರಾದ ಪಾರ್ವತಿ, ಜ್ಞಾನ ವಿಕಾಸ ಕೇಂದ್ರದ ಮೇಲ್ವಿಚಾರಕರಾದ ಲಕ್ಷ್ಮೀ, ಸಂಘದ ಸೇವಾ ಪ್ರತಿನಿಧಿ ರೇಣುಕಾ, ಮರೂರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ್ ಹಾಗೂ ಸಂಘದ ಮಹಿಳಾ ಸದಸ್ಯರು ಇದ್ದರು.