ಹುಣಸೂರು: ಬಟ್ಟೆ ಒಗೆಯುವ ವೇಳೆ ತಲೆ ಸುತ್ತಿ ನೀರಿಗೆ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಶಿವಣ್ಣನಾಯಕರ ಪತ್ನಿ ಜಯಮ್ಮ(61)ಎಂಬುವರೇ ಮೃತಪಟ್ಟ ದುರ್ದೈವಿ. ಇವರು ಹಬ್ಬದ ಹಿನ್ನಲೆಯಲ್ಲಿ ಬಟ್ಟೆ ಒಗೆಯಲೆಂದು ಗ್ರಾಮದ ಪಕ್ಕದಲ್ಲಿರುವ ಹಾರಂಗಿ ನಾಲೆಯ ಉಪಕಾಲುವೆಗೆ ತೆರಳಿದ್ದರು. ಬಟ್ಟೆ ಒಗೆಯುತ್ತಿದ್ದ ವೇಳೆ ತಲೆಸುತ್ತು ಬಂದು ನೀರಿಗೆ ಬಿದ್ದಿದ್ದಾರೆ. ಸಮೀಪದಲ್ಲಿ ಯಾರೂ ಇಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅದೇ ಮಾರ್ಗವಾಗಿ ಹೋಗುತ್ತಿದ್ದವರು ನಾಲೆಯಲ್ಲಿ ಬಟ್ಟೆ ತೇಲುತ್ತಿರುವುದನ್ನು ನೋಡಿ ಏನಾಗಿದೆ ಎಂದು ನೋಡಿದ ವೇಳೆ ನೀರಿನಲ್ಲಿ ಜಯಮ್ಮ ಅವರ ಶವ ಕಂಡು ಬಂದಿದ್ದು, ಕೂಡಲೇ ಮನೆಯವರಿಗೆ ಮಾಹಿತಿ ನೀಡಿದ್ದು, ಶವವನ್ನು ನೀರಿನಿಂದ ಮೇಲೆತ್ತಲಾಗಿದೆ. ಮೃತ ಜಯಮ್ಮಗೆ ಪತಿ ಹಾಗೂ ಓರ್ವ ಪುತ್ರ ಇಬ್ಬರು ಪುತ್ರಿಯರು ಇದ್ದಾರೆ.