ಹುಣಸೂರು: ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಾಸುಗಳಿಗೆ ಪೂಜೆ ಮಾಡಲಾಯಿತು.
ರೈತರು ತಮ್ಮ ರಾಸುಗಳನ್ನು ಬೆಳಿಗ್ಗೆ ಮೇಯಿಸಲು ಜಮೀನಿಗೆ ಹೋಗಿ ನಂತರ 11 ಗಂಟೆಯ ಒಳಗಡೆ ಮತ್ತೆ ಗ್ರಾಮಕ್ಕೆ ಬಂದು ಅವುಗಳಿಗೆ ನೀರಿನಲ್ಲಿ ಮೈ ತೊಳೆದು ಕೊಂಬುಗಳಿಗೆ ವಿವಿಧ ರೀತಿಯ ಬಣ್ಣ ಹಚ್ಚಿ ರೈತರು ತಮ್ಮ ಹಸ್ತಕ್ಕೆ ಬಣ್ಣ ಬಳಿದುಕೊಂಡು ಎತ್ತುಗಳ ಮೈ ಮೇಲೆ ಹಸ್ತದ ಗುರುತು ಬರುವ ರೀತಿ ವಿವಿಧ ಭಂಗಿಗಳಲ್ಲಿ ಚಿತ್ರಗಳನ್ನು ಬರೆಯುವರು ಜೊತೆಗೆ ಕೊಂಬುಗಳಿಗೆ ಬಣ್ಣ ಬಣ್ಣದ ಟೇಪುಗಳನ್ನು ಕಟ್ಟಿ ಹಾಗೂ ಹೂಗಳಿಂದ ಅಲಂಕರಿಸಿ ಕೊಂಬು ಹಾಗೂ ಮೈಯಿಗೆಲ್ಲ ಹರಳೆಣ್ಣೆ ಹಾಕಿ ರಾಸುಗಳನ್ನು ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ಗ್ರಾಮದ ದೇವಸ್ಥಾನಗಳಲ್ಲಿ ರಾಸುಗಳಿಗೆ ಅರ್ಚಕರು ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ನೀಡಿದರು. ಇದೇ ರಾಸುಗಳ ಮೆರವಣಿಗೆ ನಡೆಯಿತು. ಈ ಸಂದರ್ಭ ಮಹಿಳೆಯರು ರಾಸುಗಳಿಗೆ ಕಾಲಿಗೆ ನೀರು ಹಾಕಿ ಮಂಗಳಾರತಿ ಮಾಡಿ ಅಕ್ಷತೆ ಹಾಕಿ ಪೂಜೆ ಸಲ್ಲಿಸಿದರು.
ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರಾಸುಗಳಿಗೆ ರೈತರು ಪೂಜೆ ಮಾಡಿದರೆ, ಮರೂರು ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹರವೆ ಗ್ರಾಮದಲ್ಲಿ ಲಕ್ಷ್ಮೀದೇವಿ, ಮೈಲಾಂಬೂರು ಗ್ರಾಮದ ಬೀರೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದರೆ ಇನ್ನೂ ಗಾವಡಗೆರೆ ಹೋಬಳಿಯ ಸುತ್ತಮುತ್ತ ಹಲವಾರು ಗ್ರಾಮಗಳಲ್ಲಿ ಗ್ರಾಮ ದೇವತೆಯ ದೇವಸ್ಥಾನದಲ್ಲಿ ರೈತರು ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.