ಪಿರಿಯಾಪಟ್ಟಣ: ಮಳೆ ಸುರಿಯುತ್ತಿರುವ ಪರಿಣಾಮ ಕೆರೆಗಳು ಕೋಡಿ ಬಿದ್ದಿದ್ದು, ನೀರು ಪಕ್ಕದ ರೈತರ ಜಮೀನಿಗೆ ನುಗ್ಗುತ್ತಿದೆ ಪರಿಣಾಮ ಬೆಳೆಗಳು ಜಲಾವೃತವಾಗುತ್ತಿದ್ದು, ಒಂದು ವೇಳೆ ಮಳೆ ಮುಂದುವರೆದು ನೀರು ಹಾಗೆಯೇ ಜಮೀನಿನಲ್ಲಿ ನಿಂತಿದ್ದೇ ಆದರೆ ಬೆಳೆಗಳೆಲ್ಲ ಕೊಳೆತು ನಾಶವಾಗಲಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಇದೀಗ ಪಿರಿಯಾಪಟ್ಟಣ ತಾಲೂಕಿನ ಕೆಲವು ಗ್ರಾಮಗಳಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ತಂಬಾಕು ಬೆಳೆದ ರೈತರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸದ್ಯ ತಾಲೂಕಿನ ಸುಂಡವಾಳು ಗ್ರಾಮದ ವೆಂಕಟರಾಮಯ್ಯ ಅವರ ತಂಬಾಕು ಜಮೀನು ಜಲಾವೃತವಾಗಿ ಬೆಳೆ ನಾಶವಾಗಿದೆ.
ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಸತತ ಮಳೆಯಿಂದ ಕಿರನಲ್ಲಿ ಗ್ರಾಮದ ದೊಡ್ಡಕೆರೆ ಭರ್ತಿಯಾಗಿ ಕೋಡಿ ಹರಿದು ಕೆರೆ ಪಕ್ಕದಲ್ಲಿರುವ ವೆಂಕಟರಾಮಯ್ಯ ಅವರ ತಂಬಾಕು ಜಮೀನಿಗೆ ನೀರು ನುಗ್ಗಿದೆ ಪರಿಣಾಮ ಕಟಾವಿನ ಹಂತಕ್ಕೆ ಬಂದಿದ್ದ ತಂಬಾಕು ಬೆಳೆ ನೀರಿನಲ್ಲಿ ಸಿಲುಕಿ ಕೊಳೆಯುತ್ತಿದೆ.
ಕುಟುಂಬದವರೊಡನೆ ಸೇರಿ ರೈತ ವೆಂಕಟರಾಮಯ್ಯ ಅವರು ಕಷ್ಟಪಟ್ಟು ಲಕ್ಷಾಂತರ ರೂ ಖರ್ಚು ಮಾಡಿ ಜಮೀನಿನಲ್ಲಿ ತಂಬಾಕು ಬೆಳೆ ಬೆಳೆದಿದ್ದರು. ಇನ್ನೇನು ಕಟಾವು ಹಂತಕ್ಕೆ ಬಂದಿದೆ ಎಂದು ನೆಮ್ಮದಿಯುಸಿರು ಬಿಡುವ ವೇಳೆಗೆ ಜಮೀನಿಗೆ ನೀರು ನುಗ್ಗಿದ್ದು ಬೆಳೆ ನಾಶವಾಗುವ ಹಂತ ತಲುಪಿದೆ. ಇದರಿಂದ ಅನ್ಯದಾರಿ ಕಾಣದ ರೈತ ತಂಬಾಕು ಮಂಡಳಿ ಹಾಗೂ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.