ನಂಜನಗೂಡು: ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಮುಂದೆ ಕಾರ್ಮಿಕರ ಆಹೋರಾತ್ರಿ ಪ್ರತಿಭಟನೆ ಧರಣಿ ನಡೆಸುತ್ತಿದ್ದಾರೆ.
ಕಾರ್ಖಾನೆಯ ಮುಂದೆ ಜಮಾಯಿಸಿದ ಕಾರ್ಮಿಕರು ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘ ಮತ್ತು ಎ ಐ ಯು ಟಿ ಯು ಸಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಾರ್ಮಿಕರ ವೇತನವನ್ನು ಸರ್ಕಾರದ 7ನೇ ತ್ರಿಪಕ್ಷೀಯ ಮಂಡಳಿಯ ಆದೇಶದಂತೆ ಜಾರಿ ಮಾಡಬೇಕು. ಇಲ್ಲವೇ ಕಾರ್ಮಿಕರು ಸಲ್ಲಿಸಿರುವ ನ್ಯಾಯ ಸಮ್ಮತ ಬೇಡಿಕೆಗಳನ್ನು ಜಾರಿ ಮಾಡಬೇಕು. ವೇತನವನ್ನು ಪರಿಷ್ಕರಣೆ ಮಾಡಬೇಕು ಎಂದು ಕಾರ್ಮಿಕರ ಒತ್ತಾಯವಾಗಿದ್ದು.
600ಕ್ಕೂ ಕಾರ್ಮಿಕರ ಜೀವನ ಬೀದಿಗೆ ಬಿದ್ದಿದೆ. ಜೀವನ ನಡೆಸಲು ತುಂಬಾ ತೊಂದರೆಯಾಗಿದೆ. ನಾಲ್ಕು ವರ್ಷದಲ್ಲಿ ವೇತನವನ್ನು ಕಾರ್ಮಿಕರಿಗೆ ಶೇ. 13.5 ಹೆಚ್ಚಳ ಮಾಡಬೇಕು ಎಂದು ಸರ್ಕಾರ ಆದೇಶ ನೀಡಿದೆ. ದಕ್ಷಿಣ ಭಾರತದಲ್ಲಿರುವ ಕಾರ್ಖಾನೆಗಳಲ್ಲಿ ಇಲ್ಲಿ ತನಕ ಯಾವುದೇ ವೇತನವನ್ನು ಸಹ ನೀಡದೆ ಸರ್ಕಾರದ ಆದೇಶವನ್ನು ಧಿಕ್ಕರಿಸಿದ್ದಾರೆ.
ಸರ್ಕಾರದ ಆದೇಶವನ್ನು ಕಾರ್ಮಿಕರಿಗೆ ಅನ್ವಯ ಮಾಡಿಕೊಡಿ ಎಂದು ಕೇಳಿದರೆ ಉಡಾಫೆಯಿಂದ ಉತ್ತರಿಸುತ್ತಾರೆ. ನಮಗೆ ವೇತನ ಪರಿಷ್ಕರಣೆ ಮಾಡುವ ತನಕ ಮುಷ್ಕರವನ್ನು ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕಾರ್ಮಿಕರ ಮುಷ್ಕರದಿಂದ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದು, ಇದರಿಂದ ರೈತರಿಗೆ ನಷ್ಟ ಉಂಟಾಗಿದೆ. ಕಟಾವಿಗೆ ಬಂದಿರುವ ಕಬ್ಬು ಬೆಳೆಯನ್ನು ಕಟಾವು ಮಾಡದೆ ರೈತ ವರ್ಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪ್ರತಿಭಟನೆಯಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ 600ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.