ನಂಜನಗೂಡು: ಜಮೀನು ಖಾತೆಗಾಗಿ ಎರಡು ವರ್ಷಗಳಿಂದ ನಂಜನಗೂಡು ತಾಲ್ಲೂಕು ಕಛೇರಿಗೆ ರೈತ ಅಲೆದಾಡುತ್ತಿದ್ದಾನೆ.
ನಂಜನಗೂಡು ತಾಲೂಕಿನ ಮಾದಾಪುರ ಗ್ರಾಮದ ನಿವಾಸಿ ರೈತ ಮಹೇಶ್ ಗಂಭೀರವಾಗಿ ಆರೋಪಿಸಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ತಾಲ್ಲೂಕು ಕಛೇರಿಯಲ್ಲಿ ಅಧಿಕಾರಿಗಳು ಹಣ ನೀಡಿ ಎಂದು ಚಿತ್ರಹಿಂಸೆ ನೀಡುತ್ತಿದ್ದಾರೆ . ಹಣ ಕೊಟ್ಟರಷ್ಟೆ ಕೆಲಸ ಇಲ್ಲದಿದ್ದರೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ನನ್ನ ಕಷ್ಟ ಹೇಳಿಕೊಳ್ಳಲು ಶಾಸಕರ ಬಳಿ ಹೋಗಲು ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದ ಅವರು, ದಾಖಲಾತಿಗಳು ಸರಿ ಇದ್ದರೂ ಕೂಡ ಖಾತೆ ಮಾಡಿಕೊಡುತ್ತಿಲ್ಲ. ಸಬ್ ರಿಜಿಸ್ಟರ್ ಕಛೇರಿ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿದೆ. ಅಕ್ರಮವಾಗಿ ಖಾತೆ ಮಾಡಿಕೊಡುವುದನ್ನು ಬೇಗ ಮಾಡುತ್ತಾರೆ. ಆದರೆ, ಎಲ್ಲಾ ದಾಖಲಾತಿಗಳು ಇದ್ದರೂ ಕೂಡ ಖಾತೆ ಮಾಡಿ ಕೊಡುವುದಿಲ್ಲ.
ಖಾತೆ ಮಾಡಿಕೊಡಲು ತಹಶೀಲ್ದಾರ್ ಮತ್ತು ಸಬ್ ರಿಜಿಸ್ಟ್ರಾರ್ ಅಧಿಕಾರಿಗಳು ಹಣವನ್ನು ಬೇಡಿಕೆ ಇಡುತ್ತಿದ್ದಾರೆ. ಅಧಿಕಾರಿಗಳಿಗೆ ನಾನು ಹಣವನ್ನು ಕೊಟ್ಟಿಲ್ಲ ಎಂದು ಎರಡು ವರ್ಷಗಳಿಂದ ಖಾತೆ ಮಾಡಿ ಕೊಟ್ಟಿಲ್ಲ. ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಹುಲ್ಲಹಳ್ಳಿ ನಾಡಕಚೇರಿಯಲ್ಲೂ ಕೂಡ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಲಂಚ ಕೊಟ್ಟರೇ ಯಾವುದೇ ಕೆಲಸವಾದ್ರೂ ಆಗುತ್ತವೆ.
ಇಂತಹ ಭ್ರಷ್ಟ ಅಧಿಕಾರಿಗಳಿಂದ ಬಡವರು ಬದುಕುವುದು ತುಂಬಾ ಕಷ್ಟವಾಗಿದೆ. ದುಡ್ಡಿದ್ದರೆ ಮಾತ್ರ ಇಲ್ಲಿ ಕೆಲಸ, ಇಲ್ಲ ಅಂದ್ರೆ ಯಾವುದೇ ಕೆಲಸ ಆಗುವುದಿಲ್ಲ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮಹೇಶ್ ಒತ್ತಾಯ ಮಾಡಿದ್ದಾರೆ.