ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಏಪ್ರಿಲ್ ಎರಡರಂದು ನಡೆಯುವ ಐತಿಹಾಸಿಕ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಗೌತಮ ಪಂಚಮಹ ರಥೋತ್ಸವದ ದೊಡ್ಡ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಜಿಲ್ಲಾ ಮತ್ತು ತಾಲೂಕು ಆಡಳಿತ ವತಿಯಿಂದ ಜಾತ್ರೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆ ಬೆಳಿಗ್ಗೆ 6ಗಂಟೆ ಯಿಂದ 6:40 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಡೆಯುವ ಪಂಚಮಹಾ ರಥೋತ್ಸವ. ದೇಶದಲ್ಲಿ ಎಲ್ಲೂ ನಡೆಯದ ಪಂಚಮಹಾ ರಥೋತ್ಸವವು ನಾಳೆ ನಂಜನಗೂಡಿನಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಮೊದಲು ಗಣಪತಿ ನಂತರ ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ಅಮ್ಮನವರು, ಬಳಿಕ ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿಯವರ ಐದು ರಥಗಳು ಒಂದಾದ ನಂತರ ಒಂದು ಒಟ್ಟಾಗಿ ರಥ ಬೀದಿಯಲ್ಲಿ ಸಾಗಲಿವೆ.
ಅದಕ್ಕಾಗಿ ನೂರಾರು ಟನ್ ತೂಕದ ನೂರು ಅಡಿ ಎತ್ತರದ ಬೃಹತ್ ರಥ ಸೇರಿದಂತೆ ಐದು ರಥಗಳನ್ನು ವಿಶೇಷವಾಗಿ ಬಣ್ಣ ಬಣ್ಣದ ಬಾವುಟ ಹಾಗೂ ಬಂಟಿಂಗ್ಸ್ ಗಳಿಂದ ಅಲಂಕರಿಸಲಾಗಿದ್ದು ರಥೋತ್ಸವಕ್ಕೆ ಸಿದ್ಧವಾಗಿ ನಿಂತಿವೆ.
ಇನ್ನು ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ವತಿಯಿಂದ ಕುಡಿಯುವ ನೀರು, ಅನ್ನದಾಸೋಹ, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯಗಳು ,ಕಪಿಲಾ ನದಿ ತೀರದಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಸೆಡ್ಡುಗಳನ್ನು ನಿರ್ಮಾಣ ಮಾಡಲಾಗಿದೆ.
ನಾಳೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಇಂದೇ ಆಗಮಿಸಿ ದೇವಾಲಯದ ಸುತ್ತಮುತ್ತ ಹಾಗೂ ಮೊಗಶಾಲೆಯಲ್ಲಿ ಬೀಡು ಬಿಟ್ಟಿದ್ದಾರೆ.
ಇನ್ನು ದೇವಾಲಯವು ಸೇರಿದಂತೆ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯದ ಸುತ್ತಮುತ್ತ ಕೆಲವು ದಾನಿಗಳು ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೆ ದೇವಾಲಯದ ಸಮುಚ್ಚಾಯ ಸೇರಿದಂತೆ ಸುತ್ತಮುತ್ತ ತಾತ್ಕಾಲಿಕ ಹೋಟೆಲ್ ಗಳು ಪೂಜಾ ಸಾಮಗ್ರಿ ಅಂಗಡಿಗಳು ಸಿಹಿ ಮತ್ತು ಕಾರ ತಿನಿಸು ಅಂಗಡಿಗಳು ಸೇರಿದಂತೆ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ತಲೆಯೆತ್ತಿದ್ದು ಜಾತ್ರೆಗೆ ಮೆರಗು ತರುವಂತಿದ್ದವು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ದೇವಾಲಯದ ಪ್ರಧಾನ ಆಗಮಿಕರಾದ ನೀಲಕಂಠ ದೀಕ್ಷಿತ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಮಾತನಾಡಿ ಜಾತ್ರಾ ಮಹೋತ್ಸವದ ವಿಶೇಷತೆ ಹಾಗೂ ಸಕಲ ಸಿದ್ಧತೆಗಳ ಬಗ್ಗೆ ವಿವರಿಸಿದರು.