ನಂಜನಗೂಡು: ಕಿತ್ತು ಹೋಗಿರುವ ಸೋಲಾರ್ ಬೇಲಿ, ಮಣ್ಣು ಮುಚ್ಚಿರುವ ಟ್ರಂಚ್, ಕಾಡುಪ್ರಾಣಿ ಹಾವಳಿ ತಡೆಗೆ ಸಿಬ್ಬಂದಿ ವಿಫಲವಾಗಿದ್ದಾರೆ. ಎರಡು ವರ್ಷವಾದರೂ ನಷ್ಟ ಪರಿಹಾರ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಓಂಕಾರ್ ಅರಣ್ಯ ಇಲಾಖೆ ಕಚೇರಿಯ ಮುಂದೆ ಧಿಕ್ಕಾರ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಬಂಡೀಪುರ ಅರಣ್ಯ ಅಧಿಕಾರಿಯಾದ ಸಿ ಎಫ್ ರಮೇಶ್ ಕುಮಾರ್ ಸ್ಥಳಕ್ಕೆ ಬರುವ ತನಕ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ರೊಚ್ಚಿಗೆದ್ದ ರೈತರು ಬಾಳೆ, ಕಬ್ಬು ಬೆಳೆಗಳನ್ನು ಆನೆಗಳು ನಾಶ ಮಾಡಿದ್ದು ಪರಿಹಾರ ಸಿಕ್ಕಿಲ್ಲ ಗ್ರಾಮೀಣ ಪ್ರದೇಶದಲ್ಲಿ ಹುಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಇಲಾಖೆಗೆ ಕರೆ ಮಾಡಿದರೆ ಯಾರು ಸ್ವೀಕರಿಸುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಆನೆಗಳನ್ನು ಕಾಡಿಗೆ ಓಡಿಸಲು ರೈತರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ನಂತರ ಅಧಿಕಾರಿ ರಮೇಶ್ ಕುಮಾರ್ ಭೇಟಿ ನೀಡಿ ರೈತರ ಜೊತೆ ಚರ್ಚೆ ನಡೆಸಿದರು. ರೈಲ್ವೆ ಕಂಬಿ, ಕಿತ್ತುಹೋಗಿರುವ ಸೋಲಾರ್ ಬೇಲಿ ರಿಪೇರಿ ಮಾಡುವುದಕ್ಕೆ ಈಗಲೇ ಆದೇಶಿಸುತ್ತೇನೆ. ಮುಂದೆ ನಿಮ್ಮ ಸಮಸ್ಯೆಗಳಿಗೆ ನಾವು ಸ್ಪಂದಿಸಲಿದ್ದೇವೆ ಎಂದು ರೈತರಿಗೆ ಭರವಸೆ ನೀಡಿದರು.
ಡಿಸಿಎಫ್ ಬಸವರಾಜು, ಎಸಿ ಎಫ್ ರವೀಂದ್ರ,ಎ ಸಿ ಎಫ್ ಶಿವರಾಂಬಾಬು ಆರ್ ಎಫ್ಓ ಸತೀಶ್ ಕುಮಾರ್ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಹಿಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್,ಕೆಲ್ಲಿಪುರ ಮಹದೇವಸ್ವಾಮಿ ಹುಲ್ಲಹಳ್ಳಿ ಹಾಗೂ ಬೇಗೂರು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.