ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ವತಿಯಿಂದ ಕೊಡಮಾಡುವ 2022 ನೇ ಸಾಲಿನ ‘ಕನ್ನಡ ವಿಕಾಸ ರತ್ನ’ ಪ್ರಶಸ್ತಿಗೆ ಸಂಘಟನೆ, ಪ್ರಕಾಶನ, ಸಾಹಿತ್ಯ ಕ್ಷೇತ್ರದ ಮೂರು ಮಂದಿ ನಗರದ ಯುವ ಸಾಧಕರು ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ರಾಜ್ಯಾಧ್ಯಕ್ಷೆ ಹೆಚ್.ಎಲ್. ಯಮುನಾ ತಿಳಿಸಿದ್ದಾರೆ.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಕಾರ್ಯದರ್ಶಿ ಡಾ. ಬಿ.ಬಸವರಾಜು (ಸಾಂಸ್ಕೃತಿಕ ಸಂಘಟನೆ), ವಿಸ್ಮಯ ಪ್ರಕಾಶನದ ಮಾಲೀಕ ಹಾಲತಿ ಲೋಕೇಶ್ (ಪುಸ್ತಕ ಪ್ರಕಾಶನ), ಯುವ ಸಾಹಿತಿ ಹಾಗೂ ರಂಗಕರ್ಮಿ ಎಸ್. ಶಿಶಿರಂಜನ್ (ಸಾಹಿತ್ಯ ಮತ್ತು ರಂಗಭೂಮಿ) ಈ ಮೂರ ಮಂದಿ ಪ್ರತಿಭಾವಂತರನ್ನು ಅವರವರ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವಾ ಸಾಧನೆಗಾಗಿ ‘ಕನ್ನಡ ವಿಕಾಸ ರತ್ನ’ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಡಿ. 10ರಂದು ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಖ್ಯಾತ ಪತ್ರಿಕೋದ್ಯಮಿ ಹಾಗೂ ವಿಚಾರವಾದಿ ರಾಜಶೇಖರ ಕೋಟಿ ಸ್ಮರಣಾರ್ಥ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ. ರಾಮು, ಶಾಸಕರಾದ ಸಿ.ಎನ್. ಮಂಜೇಗೌಡ, ಎಲ್. ನಾಗೇಂದ್ರ, ಶಿಕ್ಷಣೋದ್ಯಮಿ ವಿ. ಕವೀಶ್ ಗೌಡ, ಸಾಹಿತಿ. ಟಿ. ಸತೀಶ್ ಜವರೇಗೌಡ ಮತ್ತಿತರ ಗಣ್ಯರ ಸಮಕ್ಷಮದಲ್ಲಿ ನಡೆಯಲಿರುವ ‘ಕನ್ನಡ ಹಬ್ಬ’ದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.