ಉಡುಪಿ: ಸಿದ್ದರಾಮಯ್ಯ ಧರ್ಮ ಬದಲಾವಣೆ ಮಾಡಿಕೊಂಡಿಲ್ಲ. ಅವರೂ ಹಿಂದೂ ಧರ್ಮದವರು. ಆದರೆ ಬಿಜೆಪಿ ಅವರನ್ನು ಹಿಂದೂ ಧರ್ಮದಿಂದ ಓಡಿಸಲು ಹುನ್ನಾರ ಮಾಡುತ್ತಿದೆ ಎಂದು ಕೆಪಿಸಿಸಿಯ ಪರಿಶಿಷ್ಠ ಜಾತಿ ಘಟಕದ ಅಧ್ಯಕ್ಷ ಆರ್. ಧರ್ಮಸೇನಾ ಹೇಳಿದರು.
ಸಿದ್ದರಾಮಯ್ಯನವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆದಿರುವ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆಗೆ ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಈ ದೇಶದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕು ಇದೆ. ಆದ್ರೆ ಬಿಜೆಪಿ ನಾಯಕರು ಈ ರೀತಿಯ ಕುಚೇಷ್ಠೆಯ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಕೂಡಲೇ ಸಿ.ಟಿ. ರವಿ ಅವರು ಸಿದ್ದರಾಮಯ್ಯನವರ ಬಗ್ಗೆ ಆಡಿರುವ ಮಾತನ್ನು ಹಿಂದಕ್ಕೆ ಪಡೆಯಬೇಕು. ಸಿ.ಟಿ. ರವಿ ಓರ್ವ ರಾಷ್ಟ್ರೀಯ ನಾಯಕರಾಗಿ, ಶಾಸಕರಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಅವರು ಈ ದೇಶದ ನಾಗರಿಕರಾಗಿ ಇರಲು ನಾಲಾಯಕ್ ಎಂದು ಟೀಕಿಸಿದರು.