ಮೈಸೂರು: ಸುತ್ತೂರು ಮಠದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 107ನೇ ಜಯಂತಿ ಅಂಗವಾಗಿ ಶ್ರೀಮಠದಿಂದ ಪ್ರತಿವರ್ಷದಂತೆ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರದ ನಿರ್ವಹಣೆಗಾಗಿ ಒಂದು ಲಕ್ಷ ರೂ.ಗಳ ಚೆಕ್ಕನ್ನು ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ.ಶಿವಕುಮಾರ್ ಅವರಿಗೆ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, 12 ವರ್ಷಗಳಿಂದ ಪ್ರತಿವರ್ಷವೂ ಶ್ರೀಗಳ ಜಯಂತಿಯಂದು ಮೃಗಾಲಯದ ಪ್ರಾಣಿಪಕ್ಷಿಗಳ ಆಹಾರ ನಿರ್ವಹಣೆಗಾಗಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಇದು ಪೂಜ್ಯ ಸುತ್ತೂರು ಶ್ರೀಗಳು ಪ್ರಾಣಿ ಪಕ್ಷಿಗಳ ಮೇಲೂ ಅಪಾರ ಕಾಳಜಿ ಹೊಂದಿರುವುದನ್ನು ಸೂಚಿಸುತ್ತದೆ. ಇಂತಹ ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಮಾರ್ಗದರ್ಶನ ಮಾಡುತ್ತಾ ಆಶೀರ್ವದಿಸುತ್ತಿರಲೆಂದು ತಿಳಿಸಿದರು.
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಜೆಎಸ್ಎಸ್ ಮಹಾವಿದ್ಯಾಪೀಠದ ಬಿ.ನಿರಂಜನಮೂರ್ತಿ ಉಪಸ್ಥಿತರಿದ್ದರು.