ಮೈಸೂರು: ನಗರದ ಡಿಎನ್ಕೆ ಸ್ನೇಹ ಬಳಗದ ವತಿಯಿಂದ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಅವರು ಬರೆದಿರುವ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಸಮಗ್ರ ಜೀವನಚರಿತ್ರೆಯಾದ ‘ಕರ್ಮಯೋಗಿ’ ಕೃತಿ ಬಿಡುಗಡೆ ಹಾಗೂ ಡಿಎನ್ಕೆ ಅರವತ್ತರ ಹೆಜ್ಜೆ ಅಭಿನಂದನಾ ಸಮಾರಂಭವು ಇದೇ ಸೆಪ್ಟೆಂಬರ್ 18ರ ಭಾನುವಾರದಂದು ಮೈಸೂರು ನಗರದ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಸಂಜೆ 4.15ಕ್ಕೆ ಆರಂಭವಾಗುವ ಈ ಸಾಹಿತ್ಯಿಕ ಸಮಾರಂಭವನ್ನು ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ಉದ್ಘಾಟಿಸಲಿದ್ದು, ನಾಡೋಜ ಪ್ರೊ.ಭಾಷ್ಯಂಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ರಾಜ್ಯದ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಭಾರತರತ್ನ ಸರ್ ಎಂ.ವಿ ಜೀವನ ಚರಿತ್ರೆ “ಕರ್ಮಯೋಗಿ”ಕೃತಿಯನ್ನು ಬಿಡುಗಡೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅಧ್ಯಕ್ಷತೆ ವಹಿಸುವರು.
ಹಿರಿಯ ವಿದ್ವಾಂಸ ಡಾ.ಸಿ.ಪಿ.ಕೆ ಕೃತಿಯ ಪ್ರಥಮ ಪ್ರತಿ ಸ್ವೀಕರಿಸಲಿದ್ದು ಇದೇ ಸಂದರ್ಭದಲ್ಲಿ ಅರವತ್ತನೇ ವಸಂತಕ್ಕೆ ಕಾಲಿಡುತ್ತಿರುವ ಕೃತಿಯ ಕರ್ತೃ ಡಿ.ಎನ್. ಕೃಷ್ಣಮೂರ್ತಿ ಅವರನ್ನು ಡಿಎನ್ಕೆ ಸ್ನೇಹ ಬಳಗದ ವತಿಯಿಂದ ಅಭಿನಂದಿಸಲಾಗುವುದು. ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅಭಿನಂದನಾ ನುಡಿಗಳನ್ನಾಡುವರು. ಮೈಸೂರು ನಗರ ಭಾಜಪ ಅಧ್ಯಕ್ಷ ಶ್ರೀವತ್ಸ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.